ನೆರವಾಗಿ ಇಲ್ಲವೇ ದಯಾಮರಣ ನೀಡಿ – ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸುಳ್ಯದ ಚಾಂದಿನಿಯಿಂದ ಸಿ.ಎಂ.ಗೆ ಪತ್ರ 

ಮಂಗಳೂರು/ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ನಾವೂರು ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಧನಂಜಯ ನಾಯ್ಕ್ ಎಂಬವರ ಪುತ್ರಿ ಬಡ ಕುಟುಂಬದ ಚಾಂದಿನಿ ಜಿ.ಡಿ. (33) ಎಂಬುವರು ‘ಹೈಪರ್‌ ಐಜಿಇ ಸಿಂಡ್ರೋಮ್‌’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ವೆಚ್ಚ ಭರಿಸಲು ಸರ್ಕಾರದ ನೆರವು ಕೋರಿದ್ದಾರೆ. ಚಿಕಿತ್ಸೆಗೆ ನೆರವು ನೀಡಲು ಸಾಧ್ಯವಾಗದಿದ್ದರೆ ದಯಾಮರಣವನ್ನಾದರೂ ನೀಡಿ ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರಿಗೆ ಇ– ಮೇಲ್‌ ಕಳುಹಿಸಿದ್ದಾರೆ.

ಚಾಂದಿನಿ ಕಾಯಿಲೆಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿರಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದ್ದರು. ಅತ್ಯಂತ ಅಪರೂಪವಾದ ‘ಹೈಪರ್‌ ಐಜಿಇ ಮೆಡಿಕೇಟೆಡ್ ಸೆಲ್ ಆಕ್ಟಿವೇಷನ್‌ ಸಿಂಡ್ರೋಮ್’ ಕಾಯಿಲೆ ಇರುವುದನ್ನು ಹೈದರಾಬಾದ್‌ ನ ಎಐಜಿ ಆಸ್ಪತ್ರೆ ವೈದ್ಯರು ಪತ್ತೆ ಹಚ್ಚಿದ್ದರು. ತೀವ್ರತರವಾದ ಅಲರ್ಜಿಯನ್ನುಂಟು ಮಾಡುವ (ಅನಫಿಲ್ಯಾಕ್ಸಿಸ್) ಈ ಕಾಯಿಲೆಗೆ ಅಲ್ಲಿ ಒಂದು ಬಾರಿ ಚಿಕಿತ್ಸೆ ಪಡೆದು ಬಳಿಕ ಮಂಗಳೂರಿನ ಸರ್ಕಾರಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆರಳಿದ್ದು ಅಲ್ಲಿ ಈ ಕಾಯಿಲೆಗೆ ಚಿಕಿತ್ಸೆ ಲಭ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಬೆಂಗಳೂರಿನ ಕೆಲವು ಆಸ್ಪತ್ರೆಯಲ್ಲಿ ಇದಕ್ಕೆ ಚಿಕಿತ್ಸೆ ಲಭ್ಯವಿದೆ ಎಂದು ತಿಳಿದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹಾಗೂ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದ ಚಾಂದಿನಿಗೆ ಅಲ್ಲಿಂದ ಯಾವುದೇ ಉತ್ತರ ಬಂದಿರಲಿಲ್ಲ ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ನಡುವೆ ಆರೋಗ್ಯ ಏರುಪೇರಾಗಿದ್ದರಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಚಾಂದಿನಿಗೆ ಸ್ಥಳೀಯರು ಆಂಬುಲೆನ್ಸ್ ನ ಪ್ರಯಾಣ ವೆಚ್ಚ ಭರಿಸುವ ಮೂಲಕ ನೆರವಾಗಿದ್ದರು. ಚಿಕಿತ್ಸೆ ವೆಚ್ಚ ಭರಿಸುವ ಬಗ್ಗೆ ಆರೋಗ್ಯ ಇಲಾಖೆಯಿಂದ ಪತ್ರ ಬಾರದ ಕಾರಣಕ್ಕೆ ಎಐಜಿ ಆಸ್ಪತ್ರೆಯವರು ಎರಡು ಸಲ ಚಿಕಿತ್ಸೆ ನೀಡುವುದನ್ನು ನಿಲ್ಲಿಸಿದ್ದರು. ಸರ್ಕಾರದಿಂದ ಭರವಸೆ ಸಿಗುತ್ತಿದೆಯಾದರೂ, ಚಿಕಿತ್ಸೆಗೆ ಹಣದ ನೆರವು ಸಿಗದ ಹಿನ್ನಲೆಯಲ್ಲಿ ಚಾಂದಿನಿ ದಯಾಮರಣ ಕೋರಿ ಮುಖ್ಯಮಂತ್ರಿಗೆ  ಪತ್ರ ಬರೆದಿದ್ದಾರೆ. 

ಆರೋಗ್ಯ ಇಲಾಖೆ ತಕ್ಷಣ ಸ್ಪಂದಿಸಿ ಚಾಂದಿನಿ ಅವರ ಚಿಕಿತ್ಸೆಗೆ ನೆರವಾಗುವ ಮೂಲಕ ಅವರನ್ನು ಬದುಕಿಸಬೇಕು‘ ಎಂದು ಚಾಂದಿನಿ ಹೋರಾಟಕ್ಕೆ ನೆರೆವಾಗುತ್ತಿರುವ ದಾರಿ ಸಂಘಟನೆ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂಪಿ, ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲು ಡಿಎಚ್‌ಒ ಈಗಾಗಲೇ ಕ್ರಮವಹಿಸಿದ್ದಾರೆ ಎಂದು ತಿಳಿಸಿದ್ದಾರೆ.  ಡಿಎಚ್‌ಒ ಡಾ.ಎಚ್‌.ಆರ್‌.ತಿಮ್ಮಯ್ಮ ಅವರಿಗೆ ಚಾಂದಿನಿ ಅವರು ಜೂನ್‌ 21ರಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದರು. ‘ನನ್ನ ಸಾವಿಗೆ ಆರೋಗ್ಯ ಸಚಿವರು ಸುಳ್ಯ ಕ್ಷೇತ್ರದ ಶಾಸಕರು ಡಿಎಚ್‌ಒ ಹೊಣೆ’ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಎಚ್‌ಒ ‘ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಚಿಕಿತ್ಸೆಗೆ ನೆರವಾಗುವ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ’ ಎಂದು ಪತ್ರ ಬರೆದಿದ್ದರು.

LEAVE A REPLY

Please enter your comment!
Please enter your name here