ಮಂಗಳೂರು: ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಭಾವವಿಲ್ಲದೆ ಉರೂಸ್, ಜಾತ್ರೆ ಎಂಬ ವ್ಯತ್ಯಾಸಗಳಿಲ್ಲದೆ ಅನ್ಯೋನ್ಯತೆಯಿಂದ ವ್ಯಾಪಾರ ಮಾಡಿಕೊಂಡು ಬಂದಿರುವ ಸಂತೆ ವ್ಯಾಪಾರಿಗಳು ಸರ್ವ ಧರ್ಮದ ಜನರ ಸಕಲ ದೇವರ ಸನ್ನಿಧಿಯಲ್ಲಿ ವ್ಯಾಪಾರ ಮಾಡಿ ಬದುಕು ಸಾಗಿಸುವವರಾಗಿದ್ದಾರೆ. ಈ ರೀತಿಯ ವ್ಯಾಪಾರದಲ್ಲಿ ಕೋಮುಭಾವನೆ ಕೆರಳಿಸಿ ,ವಿಭಜಿಸಿ ರಾಜಕೀಯ ಮಾಡುವುದನ್ನು ಸಂಘವು ಖಂಡಿಸುತ್ತದೆ. ಸಂತೆ ಮತ್ತು ಉತ್ಸವ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ 2014 ಮತ್ತು ಕರ್ನಾಟಕ ಸರಕಾರದ ಅಧಿ ನಿಯಮಗಳಡಿ ಕಾನೂನಿನ ಮಾನ್ಯತೆಯನ್ನು ಪಡೆದವರಾಗಿದ್ದು ಅವರ ಹಕ್ಕುಗಳ ರಕ್ಷಣೆಯನ್ನು ಜಿಲ್ಲಾಡಳಿತ ಮಾಡಬೇಕಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘ ಒತ್ತಾಯಿಸಿದೆ.
ನಗರದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮತೀಯ ಸಂಘಟನೆಗಳ ಹೆಸರಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿರುವ ಬ್ಯಾನರ್ಗಳನ್ನು ಹಾಕಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ಈ ರೀತಿಯ ಕೋಮು ವಿಭಜಕ ನೀತಿಗಳಿಂದ ಬಡ ಸಂತೆ ವ್ಯಾಪಾರಿಗಳ ಜೀವನ ನಿರ್ವಹಣೆಗೆ ತೊಂದರೆ ಆಗುತ್ತಿದೆ. ಹಾಗಾಗಿ ಇಂತಹ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಬೀದಿಬದಿ ವ್ಯಾಪಾರಿಗಳ ಸಂಘವು ಶನಿವಾರ ಮಂಗಳೂರು ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿ, ಮನಪಾ ಆಡಳಿತ, ತಹಶೀಲ್ದಾರ್ರಿಗೆ ಮನವಿ ಸಲ್ಲಿಸಿದೆ.