ಮಂಗಳೂರು: ನಗರದ ಬಂದರಿನಲ್ಲಿ ಪಟಾಕಿ ಉದ್ಯಮಿಯೊಬ್ಬರಿಗೆ ದುಷ್ಕರ್ಮಿಗಳ ತಂಡವೊಂದು ಜೀವ ಬೆದರಿಕೆ ಹಾಕಿರುವ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂದರು ಪ್ರದೇಶದ ಪಟಾಕಿ ಅಂಗಡಿ ಮಾಲಕ ಮುರಳೀಧರ ಪೈಗೆ ರವಿವಾರ ಸಂಜೆ ವೇಳೆ ವ್ಯಕ್ತಿಯೊಬ್ಬ ಕರೆ ಮಾಡಿ 5 ಲಕ್ಷ ರೂ. ಮೌಲ್ಯದ ಪಟಾಕಿ ಬೇಕಾಗಿದ್ದು, ನಗರದ ಹೋಟೆಲ್ ಗೆ ಬರಬೇಕೆಂದು ಸೂಚಿಸಿದ್ದು ಮುರಳೀಧರ ಪೈ ಸಾಧ್ಯವಿಲ್ಲವೆಂದು ನಿರಾಕರಿಸಿದ್ದಾರೆ. ಮರುದಿನ , ಸೋಮವಾರ ಮಧ್ಯಾಹ್ನ ಮುರಳೀಧರ ಪೈ ಅಂಗಡಿಯಲ್ಲಿರುವ ವೇಳೆ ಪರಿಚಯಸ್ಥರೇ ಆದ ದಿನೇಶ್ ಶೆಟ್ಟಿ ಹಾಗೂ ಇತರ 4 ಮಂದಿ ಏಕಾಏಕಿ ಅಂಗಡಿಗೆ ನುಗ್ಗಿ 5 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟು , ಇಲ್ಲವಾದಲ್ಲಿ ಶೂಟ್ ಮಾಡಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಕೆನ್ನೆಗೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ ಎಂದು ಮುರಳೀಧರ ಪೈ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ. ಕೃತ್ಯದ ಹಿಂದೆ ಭೂಗತ ಪಾತಕಿಯೊಬ್ಬನ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.