ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ರಥಬೀದಿಯಲ್ಲಿದ್ದ ಬೃಹತ್ ಗಾತ್ರದ ಅರಳಿ ಮರವೊಂದು ಗುರುವಾರ ಬೆಳಿಗ್ಗೆ ಧರೆಗುರುಳಿ, ಕೆಲಕಾಲ ರಸ್ತೆ ಸಂಚಾರಕ್ಕೆ ತಡೆಯಾದ ಘಟನೆ ನಡೆದಿದೆ. ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಕಾರಣ ವಿದ್ಯುತ್ ಕಂಬಗಳು ಧರೆಗುರುಳಿದ್ದರ ಪರಿಣಾಮ ಕೆಲಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಅಕ್ಕಪಕ್ಕದ ಕಟ್ಟಡಗಳಿಗಾಗಲೀ ಸಂಚರಿಸುವ ವಾಹನಗಳಿಗಾಗಲೀ ಪಾದಾಚಾರಿಗಳಿಗಾಗಲಿ ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ.
ಗುರುವಾರ ಬೆಳಗ್ಗಿನ ಹೊತ್ತು ಮರ ಏಕಾಏಕಿ ಬುಡದ ಭಾಗದಲ್ಲಿ ತುಂಡಾಗಿ ಬಿದ್ದಿದ್ದು, ವಿದ್ಯುತ್ ಕಂಬಗಳು ಧರೆಗುರುಳಿರುವುದು ಬಿಟ್ಟರೆ, ಪಕ್ಕದಲ್ಲಿದ್ದ ಪ್ರಯಾಣಿಕರ ತಂಗುದಾಣ, ಅಂಗಡಿಗೆ ಯಾವುದೇ ಹಾನಿಯಾಗಿಲ್ಲ. ಮರ ಬೀಳುವ ಕೆಲ ಹೊತ್ತಿನ ಮೊದಲೇ ಶಾಲಾ ಬಸ್ಸುಗಳು, ಇತರ ವಾಹನಗಳು ಮರ ಬಿದ್ದಿರುವ ಭಾಗದಲ್ಲೇ ಹಾದು ಹೋಗಿದ್ದವು. ಜತೆಗೆ ಬೀಳುವ ಹೊತ್ತಿನಲ್ಲೂ ದೂರದಲ್ಲಿ ದ್ವಿಚಕ್ರ ವಾಹನಗಳು ಅದೇ ಭಾಗಕ್ಕೆ ಆಗಮಿಸುತ್ತಿತ್ತು. ಬೀಳುವ ಹೊತ್ತಿನಲ್ಲಿ ಜೋರಾದ ಶಬ್ದ ಕೇಳಿಬಂದಿದ್ದು, ತಂಗುದಾಣದಲ್ಲಿ ಕೂತವರು ಕೂಡ ಬೀಳುತ್ತಿದ್ದಂತೆ ಹೆದರಿ ದೂರಕ್ಕೆ ಓಡಿದ್ದಾರೆ.