ಬೆಂಗಳೂರು: 2023ರ ಕರ್ನಾಟಕ ಚುನಾವಣೆಯನ್ನು ಟಿಪ್ಪು-ಸಾವರ್ಕರ್ ಕದನ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಿರೂಪಣೆಗೆ ಬಿಜೆಪಿಯ ಪ್ರಮುಖ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎನ್ ಡಿ ಟಿವಿ ಡಾಟ್ ಕಾಂಗೆ ನೀಡಿದ ಸಂದರ್ಶನದಲ್ಲಿ ಅವರು, ಬಿಜೆಪಿ ಪಕ್ಷದ ಧೋರಣೆಯು ಅಭಿವೃದ್ಧಿಯನ್ನು ಬಿಟ್ಟು ಟಿಪ್ಪು-ಸಾವರ್ಕರ್ನಂತಹ ವಿಷಯಗಳಿಗೆ ಬದಲಾಗುತ್ತಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, “ನಾನು ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ, ನಾವು ತುಂಬಾ ಶ್ರಮಪಡಬೇಕಾಗಿದೆ. ಬಿಜೆಪಿಯನ್ನು ಸೋಲಿಸಲು ಅತ್ತ ಕಾಂಗ್ರೆಸ್ ಕೂಡಾ ಶ್ರಮಿಸುತ್ತಿದೆ. ಮೋದಿ ಮತ್ತು ಅಮಿತ್ ಶಾ ಅವರ ಕಾರಣದಿಂದ ನಾನು ಬಹುಮತ ಪಡೆಯುವ ಕುರಿತು ತುಂಬಾ ಆತ್ಮವಿಶ್ವಾಸದಲ್ಲಿದ್ದೇನೆ ಎಂದು ಹೇಳಿದರು. ಬಿಜೆಪಿಗೆ ಇನ್ನು ಯಾವ ನಿರೂಪಣೆಯು ಹೊಂದಿಕೊಳ್ಳಬಹುದು ಎಂದು ಪ್ರಶ್ನಿಸಿದಾಗ, ‘ಕಷ್ಟಪಟ್ಟು ಕೆಲಸ ಮಾಡು’ ಎಂಬ ಮಂತ್ರ ಬಿಜೆಪಿಗೆ ಕೆಲಸ ಮಾಡಲಿದೆ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಮಾಡಿರುವ ಉತ್ತಮ ಕಾರ್ಯಯೋಜನೆಗಳನ್ನು, ಅದರ ಸಂದೇಶಗಳನ್ನು ಮನೆ ಮನೆಗೆ ತಲುಪಿಸಬೇಕಾಗಿದೆ ಎಂದು ಅವರು ಹೇಳಿದರು.