ಮೈಸೂರು: ನರಸಿಂಹರಾಜ ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಅವರು ರಾಜಕೀಯ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆಂಬ ವದಂತಿ ಹಿನ್ನೆಲೆ ಅವರ ನಿವಾಸದ ಎದುರು ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜಕೀಯ ನಿವೃತ್ತಿ ಬಗ್ಗೆ ಪತ್ರ ಬರೆದಿದ್ದಾರೆಂಬ ವಿಷಯ ತಿಳಿಯುತ್ತಿದ್ದಂತೆ ತನ್ವೀರ್ ಸೇಠ್ ನಿವಾಸದ ಎದುರು ಜಮಾಯಿಸಿದ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಬಲಿಗನೋರ್ವ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೂ ನಡೆದಿದೆ.
ಅನಾರೋಗ್ಯ ಕಾರಣದಿಂದ ಚುನಾವಣೆಗೆ ಸ್ಪರ್ಧಿಸದಿರುವ ಬಗ್ಗೆ ತೀರ್ಮಾನ ಕೈಗೊಂಡಿದ್ದು ನಿಜ ಎಂದು ಮಾದ್ಯಮಕ್ಕೆ ತಿಳಿಸಿರುವ ಸೇಠ್ ನನ್ನ ಆರೋಗ್ಯದ ವಿಚಾರ ಮುಂದಿಟ್ಟು ಕಳೆದ ಡಿಸೆಂಬರ್ ನಲ್ಲಿ ನನ್ನ ತೀರ್ಮಾನವನ್ನು ಹೈಕಮಾಂಡ್ ಗೆ ತಿಳಿಸಿದ್ದೆ. ಸೂಚನೆ ನೀಡುವ ತನಕ ಇದನ್ನು ಎಲ್ಲೂ ಬಹಿರಂಗ ಮಾಡುವುದು ಬೇಡ ಎಂದು ವರಿಷ್ಠರು ಹೇಳಿದ್ದರು. ಈಗ ಈ ವಿಚಾರ ಬಹಿರಂಗವಾಗಿದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ಎಲ್ಲರೊಂದಿಗೆ ಚರ್ಚಿಸಿ ಈ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.