ಹಾಸನ: ಸಕಲೇಶಪುರ ತಾಲೂಕಿನ ಉಚ್ಚೆಂಗಿ ಮತ್ತು ವಣಗೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೋಲುಂಟಾದ ಹಿನ್ನೆಲೆಯಲ್ಲಿ ಮನಸ್ಸಿಗಾದ ನೋವನ್ನು ನಿವಾರಿಸಲು ಸಕಲೇಶಪುರದ ಪಕ್ಷದ ಕಛೇರಿಯಲ್ಲಿಯೇ ಕೆಲವೊಂದು ನಾಯಕರು ಗುಂಡು ತುಂಡು ಪಾರ್ಟಿ ಮಾಡಿದ್ದು, ಶಿಸ್ತಿನ ಪಕ್ಷದಲ್ಲಿ ಮುಖಂಡರ ಅಶಿಸ್ತು ಎಂಬ ಶಿರೋನಾಮದಲ್ಲಿ ಫೋಟೋ ಮತ್ತು ವಿಡಿಯೋ ವೈರಲ್ ಆಗಿದ್ದು,
ಅಶಿಸ್ತು ತೋರಿದವರ ವಿರುದ್ದ ಪಕ್ಷ ಕ್ರಮ ಕೈಗೊಳ್ಳಲಿ ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಯ ಪರಾಜಯದ ಕಾರಣ ಬೇಸರದಲ್ಲಿ ಪಕ್ಷದ ತಾಲೂಕು ಸಧ್ಯಕ್ಷ ಮಂಜುನಾಥ್ ಸಾಂಗ್ವಿ ಮತ್ತು ಪ್ರಧಾನ ಕಾರ್ಯದರ್ಶಿ ಸಂದೇಶ್, ರಾಜ್ ಕುಮಾರ್ ಸೇರಿದಂತೆ ಕೆಲವು ಮುಖಂಡರು ಎಣ್ಣೆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪಾರ್ಟಿ ಮಾಡಿದ ವಿಡಿಯೋ, ಫೋಟೋ ವೈರಲ್ ಆಗುತ್ತಿದ್ದಂತೆ ತಾಲೂಕು ಅಧ್ಯಕ್ಷ ಮಂಜುನಾಥ್ ಸಾಂಗ್ವಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.