ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಿ.ಎ ವಿದ್ಯಾರ್ಥಿನಿ ಸಾವು –  ಕಲ್ಲಕಲಂಬಿಯಲ್ಲೊಂದು ದಾರುಣ ಘಟನೆ

ಮಂಗಳೂರು: ಭಾರೀ ಮಳೆಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಿ.ಎ ವಿದ್ಯಾರ್ಥಿನಿ ಅಶ್ವಿನಿ ಶೆಟ್ಟಿ(21) ಮೃತಪಟ್ಟ ಘಟನೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ಸಂಭವಿಸಿದೆ. ಗದ್ದೆಯಲ್ಲಿ ದನ ಕಟ್ಟಿ ಹಾಕಲು ಮನೆಯಿಂದ ತೆರಳಿದ್ದ ವೇಳೆ ಈ ಅವಘಡ ನಡೆದಿದೆ. ಗುರುಪುರ ಕಲ್ಲಕಲಂಬಿ ನಿವಾಸಿ ಹರೀಶ್ ಶೆಟ್ಟಿ ಎಂಬವರ ಪುತ್ರಿಯಾಗಿದ್ದು, ಮಂಗಳೂರಿನ ಕಾಲೇಜಲ್ಲಿ ಚಾರ್ಟೆಡ್ ಅಕೌಂಟೆಂಟ್ ವಿಧ್ಯಾಭ್ಯಾಸ ಮಾಡುತ್ತಿದ್ದಳು.

ಎಂದಿನಂತೆ ಹರೀಶ್ ಶೆಟ್ಟಿ ಅವರು ತಮ್ಮ ಮನೆಯ ದನಗಳನ್ನು ಗದ್ದೆಯಲ್ಲಿ ಮೇಯಲು ಕಟ್ಟಲು ಹೋಗಿದ್ದು, ಅವರ ಹಿಂದೆ ಮನೆಯ ಎರಡು ನಾಯಿಗಳು ಹೋಗಿದ್ದವು. ನಾಯಿಗೆ ಮೊದಲು ವಿದ್ಯುತ್ ಶಾಕ್ ತಗುಲಿದೆ. ಶಾಕ್ ಹೊಡೆದಿದ್ದರಿಂದ ನಾಯಿ ಗದ್ದೆಯಲ್ಲಿ ಬಿದ್ದು ಹೊರಳಾಡುವುದನ್ನು ನೋಡಿದ ಅಶ್ವಿನಿ ನಾಯಿಗಳನ್ನು ತರಲೆಂದು ಗದ್ದೆ ಕಡೆಗೆ ಹೋಗಿದ್ದಾರೆ. ಈ ವೇಳೆ ಗಮನಿಸದೇ ಅದಾಗಲೇ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದಿದ್ದಾರೆ. ಶಾಕ್‌ ಗೆ ಒಳಗಾಗಿ ತೀವ್ರ ಅಸ್ವಸ್ಥಗೊಂಡ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆ. ವಿದ್ಯುತ್ ತಂತಿ ಬಿದ್ದಿದ್ದ ಸ್ಥಳದಲ್ಲಿ ಮೂರು ನಾಯಿಗಳು ಹಾಗೂ ಒಂದು ಕೇರೆ ಹಾವು ಸಾವನ್ನಪ್ಪಿರುವುದು ಕಂಡುಬಂದಿದೆ. 

LEAVE A REPLY

Please enter your comment!
Please enter your name here