ಮಂಗಳೂರು:ನಿಷೇಧದ ತೂಗುಗತ್ತಿಯ ನೆರಳಿನಲ್ಲಿ ನಡೆಯುತ್ತಿರುವ ಕಂಬಳದ ಕೋಣ ಓಡಿಸುವವರು ಕೋಣಗಳಿಗೆ ರಕ್ತ ಬರುವಂತೆ ಹೊಡೆಯವ ಫೋಟೋ / ವೀಡಿಯೋ ಪೇಟಾ ಕ್ಯಾಮರದಲ್ಲಿ ಸೆರೆಯಾಗಿದ್ದು , ಕಂಬಳ ವಿರುದ್ದದ ತನ್ನ ಹೋರಾಟಕ್ಕೆ ಆಧಾ(ಹಾ)ರ ದೊರೆದಂತಾಗಿದೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಶುಸಂಗೋಪನಾ ಇಲಾಖೆ ದ.ಕ ಜಿಲ್ಲಾ ಕಂಬಳ ಸಮಿತಿಗೆ ನೋಟೀಸ್ ಜಾರಿ ಮಾಡಿದ್ದು , ಕಂಬಳದಲ್ಲಿ ಪ್ರಾಣಿಗಳ ಮೇಲೆ ಹಿಂಸಾಚಾರ ನಡೆಯುತ್ತಿದ್ದು, ಇದು ಸುಪ್ರೀಂ ಕೋರ್ಟ್ ನ ಆದೇಶದ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ನೋಟೀಸ್ ಜಾರಿ ಬೆನ್ನಲ್ಲೆ ಕಂಬಳದ ಕೋಣಗಳ ಮಾಲೀಕರು ಮತ್ತು ಕೋಣ ಓಡಿಸುವವರಿಗೆ ಜಿಲ್ಲಾ ಕಂಬಳ ಸಮಿತಿ ಎಚ್ಚರಿಕೆ ನೀಡಿದೆ. ಹಿಂಸಾಚಾರವನ್ನು ನಾವು ಒಪ್ಪಲ್ಲ ಕಂಬಳದ ಸಂಧರ್ಭದಲ್ಲಿ ಕೋಣಗಳಿಗೆ ಹಿಂಸೆ ನೀಡಬಾರದೆಂದು ನೀಡಿದ ಸೂಚನೆಯ ಹೊರತಾಗಿಯೂ ಕೆಲವರು ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಮುಂದೆ ಈ ರೀತಿಯ ಘಟನೆ ಮರುಕಳಿಸಿದ್ದಲ್ಲಿ ಕೋಣಗಳ ಮಾಲೀಕರು, ಕೋಣ ಓಡಿಸುವವರೇ ಜವಾಬ್ದಾರಿ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಪಿ.ಆರ್ ಶೆಟ್ಟಿ ಹೇಳಿದ್ದಾರೆ. ಕಂಬಳ ನಿಷೇಧದ ವಿವಾದ ಸುಪ್ರೀಂ ಕೋರ್ಟ್ ನ ಪಂಚಸದಸ್ಯರ ನ್ಯಾಯಪೀಠದ ಮುಂದಿದ್ದು , ಹಿಂಸಾಚಾರದ ಫೋಟೋ/ವಿಡಿಯೋ ಪೀಠದ ಮುಂದಿಡುವುದಾಗಿ ಪೇಟಾ ಹೇಳಿದೆ. ಕರೆ ಬಿಟ್ಟು ಮಂಜೊಟ್ಟಿ ಸೇರಿದ ಕೋಣಗಳಿಗೆ ಹೊಡೆಯುವ ದೃಶ್ಯ ಪೇಟಾ ಕ್ಯಾಮರಾದಲ್ಲಿ ಸೆರೆಯಾಗಿತ್ತು.