ಹೊಸದಿಲ್ಲಿ: ಅದಾನಿ ಸಮೂಹದ ವಿರುದ್ಧ ಅವ್ಯವಹಾರಗಳ ಆರೋಪ ಹೊರಿಸಿ ಅಮೆರಿಕಾದ ಶಾರ್ಟ್ ಸೆಲ್ಲರ್ ಹಿಂಡೆನ್ಬರ್ಗ್ ಸಂಸ್ಥೆಯು ಹೊರ ತಂದ ವರದಿಯಿಂದ ಉದ್ಭವಿಸಿರುವ ವಿವಿಧ ವಿಚಾರಗಳನ್ನು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಇಂದು ಆದೇಶಿಸಿ ತಜ್ಞರ ಸಮಿತಿಯನ್ನು ರಚಿಸಿದೆ.
ಅದಾನಿ ಸಮೂಹಕ್ಕೆ ಸಂಬಂಧಿಸಿದಂತೆ ಸದ್ಯ ನಡೆಯುತ್ತಿರುವ ತನಿಖೆಯನ್ನು ಸೆಬಿ ಎರಡು ತಿಂಗಳೊಳಗೆ ಪೂರ್ಣಗೊಳಿಸಿ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ. ಅದಾನಿ ಸಮೂಹ ನಿಯಮಗಳನ್ನು ಉಲ್ಲಂಘಿಸಿದೆಯೇ ಹಾಗೂ ಸ್ಟಾಕ್ ಬೆಲೆಗಳನ್ನು ತಿರುಚಿದೆಯೇ ಎಂಬ ಕುರಿತೂ ಸೆಬಿ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಿವೃತ್ತ ನ್ಯಾಯಾಧೀಶ ಅಭಯ್ ಮನೋಹರ್ ಸಪ್ರೆ ಅವರ ನೇತೃತ್ವದಲ್ಲಿ ಹಿರಿಯ ಬ್ಯಾಂಕರುಗಳಾದ ಕೆ ವಿ ಕಾಮತ್, ಒ ಪಿ ಭಟ್, ಇನ್ಫೋಸಿಸ್ ಸಹ-ಸ್ಥಾಪಕ ನಂದನ್ ನಿಲೇಕಣಿ ಹಾಗೂ ನಿವೃತ್ತ ನ್ಯಾಯಮೂರ್ತಿ ಜೆ ಪಿ ದೇವಧರ್ ಒಳಗೊಂಡ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಅದಾನಿ ವಿವಾದದ ಕುರಿತು ತನಿಖೆ ನಡೆಸುವ ಕುರಿತಂತೆ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಜ್ಞರ ಸಮಿತಿ ಶಿಫಾರಸು ಮಾಡಲಿದೆ.