ಮಂಗಳೂರಿನಲ್ಲಿ ಯುವಕನ‌ ಕೊಲೆ ಯತ್ನ – ನಾಲ್ವರು ಆರೋಪಿಗಳ ಬಂಧನ

ಮಂಗಳೂರು :ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವತಿಯ ಕರೆಯ  ಮೇರೆಗೆ ಭೇಟಿಯಾಗಲು ಹೋದ ಯುವಕನ ಮೇಲೆ ಅಲೋಶಿಯಸ್ ಕಾಲೇಜು ಬಳಿ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕದ್ರಿ ಮಲ್ಲಿಕಟ್ಟೆ ನಿವಾಸಿ ಮೊಹಮ್ಮದ್ ತುಫೈಲ್ (20), ನೀರು ಮಾರ್ಗ ನಿವಾಸಿ ಮೊಹಮ್ಮದ್ ಅಫ್ರಿದ್ (19), ಮಕ್ಸುದ್ ಸಾಗ್ (21), ಬೋಳಾರ ಮುಳಿಹಿತ್ಲು ನಿವಾಸಿ ಅಬ್ದುಲ್ ಸತ್ತಾರ್ (19) ಎಂದು ಗುರುತಿಸಲಾಗಿದೆ.

ಕಳೆದ ಜೂನ್ 16ರಂದು ರಾತ್ರಿ 9.45ರ ಸಮಯಕ್ಕೆ ಅಲೋಶೀಯಸ್ ಕಾಲೇಜು ಬಳಿ ಕಿನ್ನಿಗೋಳಿ ಏಳಿಂಜೆ ನಿವಾಸಿ ಪ್ರಿಯಾ ಪಿಂಟೋ ಎಂಬಾಕೆಯು ನಿದೀಶ್ ಎಂಬಾತನನ್ನು ಇನ್ಸ್ಟಾಗ್ರಾಮ್ ನಲ್ಲಿ ಸಂಪರ್ಕ ಮಾಡಿ ಮಾತನಾಡಲು ಬರುವಂತೆ ತಿಳಿಸಿದ್ದಾಳೆ. ನಿದೀಶ್ ತನ್ನಿಬ್ಬರು ಸ್ನೇಹಿತರೊಂದಿಗೆ ಸ್ಥಳಕ್ಕೆ ಬಂದಾಗ ಕಾರಿನಲ್ಲಿ ಬಂದ ಪ್ರಿಯಾ ಮತ್ತು ಆಕೆಯ ಜತೆಯಲ್ಲಿದ್ದ ನಾಲ್ವರು ಆರೋಪಿಗಳು ನಿದೀಶ್ ಮತ್ತು ಸ್ನೇಹಿತರ ಜತೆ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಈ ನಾಲ್ವರು ಆರೋಪಿಗಳು ನಿದೀಶ್ ನಿಗೆ ಹೊಡೆದು, ಎದೆಯ ಎಡಭಾಗಕ್ಕೆ ಚೂರಿಯಿಂದ ಇರಿದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ನಿದೀಶ್ ಸ್ನೇಹಿತರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ನಿದೀಶ್ ಸ್ನೇಹಿತ ನೀಲೆಶ್ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here