ನೃತ್ಯ ಕಲೆಯ ಕಲಿಯುವಿಕೆಯಿಂದ ಜೀವನದಲ್ಲಿ ತಾಳ್ಮೆ ಸಹನೆ ಸಾಧ್ಯ: ಸಭಾಪತಿ ಯು ಟಿ ಖಾದರ್

ಮಂಗಳೂರು: ನೃತ್ಯ ಕಲೆಯ ಕಲಿಯುವಿಕೆಯಿಂದ ಜೀವನದಲ್ಲಿ ತಾಳ್ಮೆ, ಸಹನೆ, ಏಕಾಗ್ರತೆ ಬೆಳೆಯಲು ಸಾಧ್ಯ ಎಂದು ಕರ್ನಾಟಕ ಸರಕಾರದ ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ಅಭಿಪ್ರಾಯ ಪಟ್ಟರು.

ಅವರು ನಗರದ ಪುರಭವನದಲ್ಲಿ ಭರತಾಂಜಲಿ(ರಿ) ಕೊಟ್ಟಾರ ಮಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿರುವ ನೃತ್ಯಾಮೃತಂ 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭರತನಾಟ್ಯ ಮತ್ತು ಯಕ್ಷಗಾನ ಕರಾವಳಿಯ ಎರಡು ಕಣ್ಣುಗಳು. ಮನುಷ್ಯ ಸುಸಂಸ್ಕೃತ ಜೀವನಕ್ಕೆ ಕಲಾಭಿರುಚಿಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಭರತನಾಟ್ಯ ಕಲೆಯು ಆಧ್ಯಾತ್ಮಿಕ ವಿಷಯಗಳ ಅರಿವನ್ನು ನೀಡುತ್ತದೆ. ಈ ಕಲೆಯಲ್ಲಿ ಪ್ರಸಿದ್ಧಿ ಪಡೆಯಬೇಕಾದರೆ ಕಠಿಣ ಪರಿಶ್ರಮ ಅತ್ಯಗತ್ಯ
ಎಂದರು.

ಸನಾತನ ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ನು ಮಕ್ಕಳಿಗೆ ಹಾಗೂ ಯುವ ಜನಾಂಗಕ್ಕೆ ತಿಳಿಸುವ ಮೂಲಕ ಮುಂದಿನ ಪೀಳಿಗೆಯನ್ನು ಸುಂಸ್ಕೃತರಾಗಿಸಲು ನಾವು ಹಾಗೂ ಕಲಾವಿದರು ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಕಳೆದ 28 ವರ್ಷಗಳಿಂದ ಕಲಾ ಸೇವೆಯಲ್ಲಿ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಭರತಾಂಜಲಿಯ ಕಲಾ ಗುರುಗಳಾದ ಶ್ರೀಧರ ಹೊಳ್ಳ , ಪ್ರತಿಮಾ ಶ್ರೀಧರ್ ದಂಪತಿಗಳು ಅಭಿನಂದನಾರ್ಹರು ಎಂದರು.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಪೊಳಲಿ, ಗಿರಿ ಪ್ರಕಾಶ್ ತಂತ್ರಿ, ನಾಟ್ಯ ಗುರು ಕಲಾಶ್ರೀ ಕಮಲಾ ಭಟ್ ಉಪಸ್ಥಿತರಿದ್ದರು. ಭರತಾಂಜಲಿಯ ನಿರ್ದೇಶಕ ಶ್ರೀಧರ ಹೊಳ್ಳ ಸ್ವಾಗತಿಸಿ, ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್ ವಂದಿಸಿದರು.

ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿಯರಾದ ವಿದುಷಿ ಪಕ್ಷಿಲಾ ಜೈನ್ ಮಾನಸ ಕುಲಾಲ್, ವಂದನಾರಾಣಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here