ವಿವಾಹ ಭರವಸೆ ನೀಡಿ ಯುವತಿಗೆ ವಂಚನೆ – ಬಿಗ್ ಬಾಸ್ ಸ್ಪರ್ಧಿ ಶಿಯಾಝ್ ಕರೀಂ ಬಂಧನ

ಮಂಗಳೂರು(ಕಾಸರಗೋಡು): ವಿವಾಹ ಭರವಸೆ ನೀಡಿ ಯುವತಿಯೋರ್ವಳಿಗೆ ಕಿರುಕುಳ ನೀಡಿದ ಬಗ್ಗೆ ಲಭಿಸಿದ ದೂರಿನಂತೆ ಬಿಗ್ ಬಾಸ್ ನಟ ಶಿಯಾಝ್ ಕರೀಂ (34)ನನ್ನು ಕಾಸರಗೋಡು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ವಿದೇಶದಿಂದ ಬಂದಿಳಿದ ಶಿಯಾಝ್ ನನ್ನು ಕಾಸರಗೋಡು ಪೊಲೀಸರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಶಿಯಾಝ್ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ ಬಿಡುಗಡೆ ಗೊಳಿಸಿದ್ದರು. ಕಾಸರಗೋಡು ಪಡನ್ನ ದ 32ರ ಹರೆಯದ ಯುವತಿ ನೀಡಿದ ದೂರಿನಂತೆ ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಶಿಯಾಝ್ ಬಿಗ್ ಬಾಸ್ ರಿಯಾಲಿಟಿ ಶೋ ಗಳಲ್ಲಿ ಪಾಲ್ಗೊಂಡಿದ್ದರು. ಎರ್ನಾಕುಲಂ ನ ಜಿಮ್ ವೊಂದರಲ್ಲಿ ಕೆಲಸಕ್ಕಿದ್ದ ದೂರುದಾತೆಗೆ ವಿವಾಹವಾಗುವ ಭರವಸೆ ನೀಡಿ ಹಲವು ಕಡೆಗಳಿಗೆ ಕರೆದೊಯ್ದು ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಇದಲ್ಲದೇ ಶಿಯಾಝ್ ಸುಮಾರು 11 ಲಕ್ಷ ರೂ. ಪಡೆದು ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. 2021 ರಿಂದ 2023 ರ ತನಕ ಮೂರು ವರ್ಷಗಳಲ್ಲಿ ಎರ್ನಾಕುಲಂ, ಮುನ್ನಾರ್ ರೆಸಾರ್ಟ್ ಹಾಗೂ ಇನ್ನಿತರ ಕಡೆಗಳಿಗೆ ಕರೆದೊಯ್ದು ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ನಡುವೆ ಬೇರೆ ಯುವತಿಯ ಜೊತೆ ವಿವಾಹ ನಿಶ್ಚಯ ಕುರಿತು ಶಿಯಾಝ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದು, ವಿವಾಹ ಭರವಸೆ ನೀಡಿ ತನ್ನನ್ನು ವಂಚಿಸಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.

 

LEAVE A REPLY

Please enter your comment!
Please enter your name here