ತಂದೆಯನ್ನೇ ಕೊಲೆಗೈದ ಪಾಪಿ ಪುತ್ರ ಪೊಲೀಸ್‌ ವಶಕ್ಕೆ – 14 ದಿನಗಳ ಕಾಲ ನ್ಯಾಯಾಂಗ ಬಂಧನ

ಮಂಗಳೂರು(ಬ್ರಹ್ಮಾವರ): ಪೆಜಮಂಗೂರು ಗ್ರಾಮದ ಮೊಗವೀರಪೇಟೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಗನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಆನಂದ ಮರಕಾಲ(50) ಎಂಬಾತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈತ ತನ್ನ ತಂದೆ ಸಾಧು ಮರಕಾಲ(68) ಅವರನ್ನು ಅ.7ರಂದು ಮಧ್ಯಾಹ್ನ ಮನೆಯಲ್ಲಿ ಕತ್ತಿಯಿಂದ ಕಡಿದು  ಕೊಲೆ ಮಾಡಿ ಪರಾರಿಯಾಗಿದ್ದನು. ತನಿಖಾಧಿಕಾರಿ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ನೇತೃತ್ವದಲ್ಲಿ ಆರೋಪಿಯನ್ನು ಉಪ್ಪೂರು ಎಂಬಲ್ಲಿ ಬಂಧಿಸಲಾಗಿತ್ತು. ಮನೆಗೆ ಬಂದು ತಂದೆ ಜೊತೆ ಆಗ್ಗಾಗೆ ಗಲಾಟೆ ಮಾಡುತ್ತಿದ್ದ ಆನಂದ, ಸಾಧು ಅವರನ್ನು ಮನೆಯಿಂದ ಹೊರ ಹಾಕಬೇಕೆಂದು ದ್ವೇಷವನ್ನು ಹೊಂದಿದ್ದನು. ಇದೇ ದ್ವೇಷದಿಂದ ಆತ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here