ಅ.19ಕ್ಕೆ ನ್ಯಾಯಬೆಲೆ ಅಂಗಡಿ ಬಂದ್ ಗೆ ಕರೆ

ಮಂಗಳೂರು(ಬೆಂಗಳೂರು): ಅನ್ನಭಾಗ್ಯ ಯೋಜನೆಯಡಿಯಲ್ಲಿ ಗ್ರಾಹಕರಿಗೆ ಹಣವನ್ನು ನೀಡುವ ಬದಲಿಗೆ 10 ಕೆ.ಜಿ. ಅಕ್ಕಿಯನ್ನು ನೀಡುವಂತೆ ಆಗ್ರಹಿಸಿ ಅ.19ಕ್ಕೆ ಸಾಂಕೇತಿಕವಾಗಿ ನ್ಯಾಯಬೆಲೆ ಅಂಗಡಿ ಬಂದ್ ಮಾಡಲಾಗುವುದು ಎಂದು ಬೆಂಗಳೂರು ನಗರ ಸರಕಾರಿ ಪಡಿತರ ವಿತರಕರ ಹಿತರಕ್ಷಣಾ ಸಂಘದ ಕಾರ್ಯದರ್ಶಿ ಡಿ.ಪಿ. ಮಾದಪ್ಪ ತಿಳಿಸಿದ್ದಾರೆ.

ಮಂಗಳವಾರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸರಕಾರ ಅಧಿಕಾರಕ್ಕೆ ಬಂದು ಆರನೇ ತಿಂಗಳಿಗೆ ಕಾಲಿಟ್ಟಿದ್ದು, ನಗದು ಬದಲು ಹತ್ತು ಕೆ.ಜಿ. ಅಕ್ಕಿ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಸೌಜನ್ಯಕ್ಕಾದರೂ ಸರಕಾರ ನಮ್ಮ ಸಂಘಟನೆಗಳೊಂದಿಗೆ ಚರ್ಚಿಸಿಲ್ಲ ಎಂದು ಹೇಳಿದರು. ಐದು ಕೆ.ಜಿ. ಅಕ್ಕಿ ಬದಲಿಗೆ ನಗದು ಸೌಲಭ್ಯ ಕಲ್ಪಿಸುತ್ತಿರುವುದರಿಂದ ನಮಗೆ ದೊರೆಯಬೇಕಾದ ಕಮೀಷನ್ ಹಣ ಸಿಗದೆ ವಂಚಿತರಾಗುತ್ತಿದ್ದೇವೆ. ಐದು ಕೆ.ಜಿ.ಯ ಅಕ್ಕಿಯ ಬದಲಾಗಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ನೀಡುವುದಕ್ಕೆ ನಮ್ಮ ಯಾವುದೇ ತರಕಾರು ಇಲ್ಲ. ಆದರೆ ತಾವು ಈಗಾಗಲೇ ಆಶ್ವಾಸನೆ ನೀಡಿರುವಂತೆ 5 ಕೆಜಿ ಅಕ್ಕಿಗೆ ಬದಲಾಗಿ 170 ರೂಪಾಯಿಗಳ ಹಣಕ್ಕೆ ನಮಗೆ ಬರಬೇಕಾದ 6.50 ರೂ. ಕಮೀಷನ್ ಮೊತ್ತವನ್ನು ನಮಗೆ ಪಾವತಿಸಬೇಕು ಎಂದು ಒತ್ತಾಯಿಸಿದರು. ಕಷ್ಟದಲ್ಲಿರುವ ನಮ್ಮ ವಿತರಕರು ಯಾವುದೇ ಕಾರಣಕ್ಕೂ ಹೊಸ ಆದೇಶದನ್ವಯ ರಸೀದಿ ಪ್ರಿಂಟರ್ ಗಳನ್ನು ಖರೀದಿಸಲು ಸಾಧ್ಯವಿಲ್ಲ. ಇದನ್ನು ಸರಕಾರದಿಂದಲೇ ಒದಗಿಸಬೇಕು. ಬಾಕಿ ಇರುವ 4 ತಿಂಗಳುಗಳ ಕಮೀಷನ್ ಹಣ ಹಾಗೂ ವರ್ಷಗಳಿಂದ ಪಡಿತರ ವಿತರಕರಿಗೆ ಬರಬೇಕಿರುವ ಬಾಕಿ ಮೊತ್ತವನ್ನು ತಕ್ಷಣವೇ ಒದಗಿಸಬೇಕು. ಮನಸೋ ಇಚ್ಚೆ ನ್ಯಾಯ ಬೆಲೆ ಅಂಗಡಿಗಳನ್ನು ಮಂಜೂರು ಮಾಡಬಾರದು ಎಂದು ಅವರು ಆಗ್ರಹಿಸಿದರು. ಇದೇ ವೇಳೆ ಬೆಂಗಳೂರು ನಗರ ಸರ್ಕಾರಿ ಪಡಿತರ ವಿತರಕರ ಸಂಘ ಪಡಿತರ ವಿತರಕರ ಸಂಘ ಖಜಾಂಜಿ ರಾಮಯ್ಯ, ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಜಯಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here