ಆನೆಯ ಕಣ್ಣು ಕುಕ್ಕಿದ ಬೆಳಕು-ಕರಿಯ ಕೋಪಕ್ಕೆ ಕಾರು ಜಖಂ-ಪುತ್ತೂರಿನ ಇಬ್ಬರಿಗೆ ಗಾಯ

ಮಂಗಳೂರು: ಕಾರೊಂದರ ಮೇಲೆ ಕಾಡಾನೆ ದಾಳಿ ಮಾಡಿ ಇಬ್ಬರನ್ನು ಗಾಯಗೊಳಿಸಿದ್ದು, ಕಾರಿಗೆ ಹಾನಿ  ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯದ ಅಣಿಯೂರಿನಲ್ಲಿ ನ.27ರ ರಾತ್ರಿ ಸಂಭವಿಸಿದೆ. ಕಾರಿನಲ್ಲಿ ಮಗು ಸಹಿತ ಏಳು ಮಂದಿಯಿದ್ದು ಅವರು ನೆರಿಯದ ಸಂಬಂಧಿಕರ ಮನೆಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಪುತ್ತೂರು ಮೂಲದ ಅಬ್ದುಲ್ ರೆಹಮಾನ್ (40) ಮತ್ತು ನಾಸಿಯಾ (30) ಗಾಯಾಳುಗಳು ಎಂದು ತಿಳಿದು ಬಂದಿದೆ. ರೆಹಮಾನ್ ಅವರ ತಲೆ ಮತ್ತು ಕಾಲಿಗೆ ಗಾಯವಾಗಿದ್ದರೆ, ನಾಸಿಯಾ ಅವರ ಕಾಲಿಗೆ ಗಾಯವಾಗಿದೆ.  ಕಕ್ಕಿಂಜೆಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ತೋಟತ್ತಾಡಿ ಪರಿಸರದಲ್ಲಿ ಸೋಮವಾರ ಬೆಳಗ್ಗೆ ಇದೇ ಕಾಡಾನೆ ಕಾಣಿಸಿದ್ದು, ಪರಿಸರದಲ್ಲಿ ಓಡಾಡಿ ಯಾವುದೇ ಹಾನಿ ಎಸಗದೆ ಕಾಡಿಗೆ ಮರಳಿತ್ತು. ಆದರೆ ರಾತ್ರಿಯ ವೇಳೆ ನೆರಿಯದ ಬಯಲು ಶಾಲೆಯ ಬಳಿ ಮತ್ತೆ ಆನೆ ಪ್ರತ್ಯಕ್ಷಗೊಂಡಿದೆ. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಜೀಪೊಂದರ ಹೆಡ್‌ ಲೈಟ್‌ ಬೆಳಕು ಆನೆಯ ಕಣ್ಣಿಗೆ ಕುಕ್ಕಿದ್ದು, ಆನೆ ವ್ಯಗ್ರವಾಗಿದೆ.

ಸ್ಥಳೀಯ ಜನರು ಬೊಬ್ಬೆ ಹೊಡೆದು, ಪಟಾಕಿ ಸಿಡಿಸಿ ಆನೆಯ ಸಿಟ್ಟು ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ.  ಕೆರಳಿದ ಆನೆ ಪರಿಸರದ ಜನನಿಬಿಡ ಪ್ರದೇಶಗಳಲ್ಲಿ ಓಡಾಟ ನಡೆಸಿದೆ. ಒಬ್ಬರ ಮನೆಯಂಗಳಕ್ಕೂ ಪ್ರವೇಶಿಸಿದ್ದಲ್ಲದೇ ರಸ್ತೆ ಬದಿ ಇರುವ ಮನೆಯೊಂದರ ಗೇಟನ್ನು ಮುರಿಯಲು ಪ್ರಯತ್ನಿಸಿದೆ. ಆನೆಯ ರಂಪಾಟ ತಿಳಿದಿದ್ದ ಸ್ಥಳೀಯರು ಆ ದಾರಿಯಾಗಿ ಬಂದ ಕಾರನ್ನು ಮುನ್ನೆಚ್ಚರಿಕೆ ದೃಷ್ಟಿಯಿಂದ ನಿಲ್ಲಿಸುವಂತೆ ಸೂಚಿಸಿದ್ದಾರೆ. ಕಾರನ್ನು ಕಟ್ಟಡವೊಂದರ ಬದಿಯಲ್ಲಿ ನಿಲ್ಲಿಸುವಷ್ಟರಲ್ಲಿ ಅಲ್ಲಿಗೆ ಆನೆ ಬಂದಿದೆ. ಕಾರಿನಲ್ಲಿದ್ದ ಕೆಲವರು ಪಕ್ಕದ ಮನೆಯಲ್ಲಿ ರಕ್ಷಣೆ ಪಡೆದಿದ್ದರು. ಆನೆ ದಾಡೆಯ ಮೂಲಕ ಕಾರನ್ನು ಕಟ್ಟಡದ ಗೋಡೆಗೆ ಗುದ್ದಿ ಜಖಂಗೊಳಿಸಿ ಮನೆಯ ಕಾಂಪೌಂಡ್‌ಗೆ ನುಗ್ಗಿ ಅಲ್ಲಿಂದ ತೋಟಕ್ಕೆ ಹೋಗಿದೆ. ಬಳಿಕ ನದಿಯ ಪರಿಸರದಲ್ಲಿ ಕಂಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬಂದಿ ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಕಾಡಿನತ್ತ ಅಟ್ಟಲು ಪ್ರಯತ್ನ ನಡೆಸಿದ್ದರು.

LEAVE A REPLY

Please enter your comment!
Please enter your name here