ಕೇರಳದಲ್ಲಿ ಮತ್ತೆ ಕೊರೋನಾ-ದಾಖಲಾದ ಎರಡು ಸಾವಿನ ಪ್ರಕರಣ-ತಮಿಳುನಾಡು, ಕರ್ನಾಟಕದಲ್ಲೂ ಎಚ್ಚರಿಕೆ ಕ್ರಮ

ಮಂಗಳೂರು: ದೇಶವನ್ನೇ ಕಾಡಿ ಬೆಚ್ಚಿ ಬೀಳಿಸಿದ ಸಾಂಕ್ರಾಮಿಕ ರೋಗ ಕೊರೋನಾ ಮತ್ತೆ ಕೇರಳದಲ್ಲಿ ಉಲ್ಬಣವಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ಸಾಂಕ್ರಾಮಿಕ ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ.  ಕ್ಯಾಲಿಕಟ್‌ ಜಿಲ್ಲೆಯ ವಟ್ಟೋಲಿಯಾದ ಕುಮಾರನ್(77) ಮತ್ತು ಕಣ್ಣೂರು ಜಿಲ್ಲೆಯ ಪಾನೂರಿನ ಪಾಲಕಂಡಿ ನಿವಾಸಿ ಅಬ್ದುಲ್ಲಾ(82) ರೂಪಾಂತರಿ ಸೋಂಕಿಗೆ ಬಲಿಯಾಗಿದ್ದಾರೆ.

2020, 21 ರಲ್ಲಿ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್‌ 4 ವರ್ಷದ ಬಳಿಕ ಮತ್ತೆ ತನ್ನ ಪ್ರತಾಪ ತೋರಿಸಲು ಆರಂಭಿಸಿದೆ. ಸಿಂಗಾಪುರ, ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ಹಲವಾರು ಆಗ್ನೇಯ ಏಷ್ಯಾದ ದೇಶಗಳಲ್ಲಿ ಕೊರೋನಾ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಈ ಸಮಯದಲ್ಲಿ ಕೇರಳದಲ್ಲೂ ಕೊರೋನಾ ತ್ವರಿತ ಏರಿಕೆ ಕಂಡಿದೆ. ಓಮಿಕ್ರಾನ್‌ನ ಉಪ ತಳಿಯಾದ ಜೆಎನ್.1 ಹೆಚ್ಚಳವು ಕೇರಳದಲ್ಲಿ ಈಗ ಆತಂಕಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಆದರೆ ವೈರಸ್‌ಗಳ ನಿರಂತರ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇದ್ದರೆ ಕೇರಳ ಸರ್ಕಾರವು ಸೂಕ್ಷ್ಮ ಪ್ರದೇಶಗಳಲ್ಲಿ ನಿರ್ಬಂಧಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ವಿಧಿಸಬಹುದು ಎಂದು ಹೇಳಲಾಗುತ್ತಿದೆ. ಕೇವಲ ಒಂದು ತಿಂಗಳಲ್ಲಿ ಕೇರಳದಲ್ಲಿ ಸಕ್ರಿಯ ಪ್ರಕರಣಗಳು 33 ರಿಂದ 768 ಕ್ಕೆ ಏರಿಕೆಯಾಗಿದ್ದು ಆತಂಕವನ್ನು ಉಂಟುಮಾಡಿದೆ. ಇದೀಗ ನೆರೆಯ ತಮಿಳುನಾಡಿನಲ್ಲೂ ಸಂಕ್ರಾಮಿಕ ರೋಗ ಕೊರೋನಾ ಉಲ್ಬಣವಾಗಿ, ಆತಂಕ ಸೃಷ್ಠಿಸಿದೆ. ಕರ್ನಾಟಕದಲ್ಲಿ ಎಚ್ಚರಿಕೆ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

LEAVE A REPLY

Please enter your comment!
Please enter your name here