ಗ್ರಾಮವಾಸಿಗಳ ನಡುವೆ ದ್ವೇಷ ತಂದಿಟ್ಟ ಪ್ರೇಮ ಪ್ರಕರಣ- ಬೆಳಗಾವಿಯ ಎರಡು ಗ್ರಾಮಗಳ ಯುವಕರ ನಡುವೆ ಜಟಾಪಟಿ-ಮುಸುಕುಧಾರಿಗಳಿಂದ ನಾಲ್ಕು ಮನೆಗಳ ಮೇಲೆ ದಾಳಿ

ಮಂಗಳೂರು(ಬೆಳಗಾವಿ): ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ 30ಕ್ಕೂ ಅಧಿಕ ಮುಸುಕುಧಾರಿಗಳು ಸಿನಿಮೀಯ ರೀತಿಯಲ್ಲಿ ನುಗ್ಗಿ ಗೂಂಡಾಗಿರಿ ನಡೆಸಿರುವ ಘಟನೆ ಸೋಮವಾರ ಜ.1ರ ರಾತ್ರಿ ಬೆಳಗಾವಿ ಗ್ರಾಮೀಣ ಭಾಗದ ನಾವಗೆ ಗ್ರಾಮದಲ್ಲಿ ನಡೆದಿದೆ.

ರಾತ್ರಿ ಏಕಾಏಕಿ ನಾವಗೆ ಗ್ರಾಮಕ್ಕೆ ನುಗ್ಗಿದ ಮುಸುಕುಧಾರಿ ಯುವಕರ ತಂಡ, ಸಿನಿಮೀಯ ರೀತಿಯಲ್ಲಿ ಕೈಯಲ್ಲಿ ಬಂದೂಕು, ತಲ್ವಾರ್, ರಾಡ್, ಕಲ್ಲುಗಳಿಂದ ಗ್ರಾಮದ ನಾಲ್ಕು ಮನೆಗಳ ಮೇಲೆ ದಾಳಿ ಮಾಡಿದೆ. ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರು, ಆರು ಬೈಕ್ ಜಖಂಗೊಳಿಸಿರುವ ತಂಡ ಮಾಜಿ ಮತ್ತು ಹಾಲಿ ಗ್ರಾಮ ಪಂಚಾಯತ್ ಸದಸ್ಯರ ಮನೆ ಮೇಲೂ ದಾಳಿ ಮಾಡಿದೆ. ಡಿಸೆಂಬರ್ 31ರ ರಾತ್ರಿ ಪ್ರೀತಿ ವಿಚಾರಕ್ಕೆ ಬಾದರವಾಡಿ ಮತ್ತು ನಾವಗೆ ಯುವಕನ ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ಮಧ್ಯ ಪ್ರವೇಶ ಮಾಡಿ ಎರಡೇಟು ಕೊಟ್ಟು ಗ್ರಾಮದ ಹಿರಿಯರು ಜಗಳ ಬಿಡಿಸಿದ್ದರು. ಇದಾದ ಬಳಿಕ ನಾವಗೆ ಗ್ರಾಮದ ಯುವಕರು ಬಾದರವಾಡಿ ಯುವಕರಿಗೆ ನಿಮ್ಮನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಇದನ್ನೇ ಕಾರಣವಾಗಿಟ್ಟು ಬಾದರವಾಡಿ ಗ್ರಾಮದ ಯುವಕರು ನಾವಗೆ ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here