ಉಳ್ಳಾಲ: ನೇಪಾಳ ಮೂಲದ 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳೂರು (ಉಳ್ಳಾಲ): ನೇಪಾಳ ಮೂಲದ ಅಪ್ರಾಪ್ತ ಬಾಲಕಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೊಕ್ಕೊಟ್ಟು, ಚೆಂಬುಗುಡ್ಡೆಯ ಬಾಡಿಗೆ ಮನೆಯಲ್ಲಿ ನಡೆದಿದೆ.


ಮೃತ ಅಪ್ರಾಪ್ತ ಬಾಲಕಿಯನ್ನು ನೇಪಾಳ ಮೂಲದ ರಬೀನ ಬಿ.ಕೆ (16) ಎಂದು ಗುರುತಿಸಲಾಗಿದೆ.
ತೊಕ್ಕೊಟ್ಟು ವೃಂದಾವನ ಹೊಟೇಲಿನ ಪಕ್ಕದಲ್ಲಿ ಫಾಸ್ಟ್ ಫುಡ್ ಕಮ್ ಕ್ಯಾಂಟೀನ್ ನಡೆಸುತ್ತಿದ್ದ ನೇಪಾಳ ಮೂಲದ ರಾಮ್ ಶರಣ್ ಎಂಬವರು ತನ್ನ ಪತ್ನಿ ಮತ್ತು ನಾಲ್ಕು ಮಕ್ಕಳೊಂದಿಗೆ ತೊಕ್ಕೊಟ್ಟು, ಚೆಂಬುಗುಡ್ಡೆಯ ರೀಟಾ ಡಿ ಸೋಜ ಎಂಬವರ ಮನೆಯಲ್ಲಿ ಬಾಡಿಗೆಗೆ ನೆಲೆಸಿದ್ದರು. ರಾಮ್ ಶರಣ್ ಅವರ ಎರಡನೇ ಮಗಳಾದ ರಬೀನ ನೇಪಾಳದಲ್ಲಿ ಎಂಟನೇ ತರಗತಿ ಓದುತ್ತಿದ್ದು,ಆಕೆಯನ್ನು ಮಂಗಳೂರಿನಲ್ಲೆ ಓದಿಸುವ ಸಲುವಾಗಿ ತಿಂಗಳ ಹಿಂದೆ ಪೋಷಕರು ತೊಕ್ಕೊಟ್ಟಿಗೆ ಕರೆ ತಂದಿದ್ದರು. ಆದರೆ ರಬೀನ ತಾನು ನೇಪಾಳದಲ್ಲೇ ಓದು ಮುಂದುವರಿಸುವುದಾಗಿ ಹಠ ಹಿಡಿದಿದ್ದು, ಈ ಬಗ್ಗೆ ಪೋಷಕರಲ್ಲಿ ಗಲಾಟೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ.
ಮಧ್ಯಾಹ್ನ ರಬೀನಳ ತಾಯಿ‌ ರಮೀಲ ಅವರು ಚಿಕ್ಕ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರಲು ಹೋಗಿದ್ದ ವೇಳೆ ರಬೀನ, ಮನೆಯ ಶೌಚಾಲಯದ ಕಬ್ಬಿಣದ ಸಲಾಕೆಗೆ ಚೂಡಿದಾರದ ಶಾಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಉಳ್ಳಾಲ ಠಾಣಾ ಪೊಲೀಸರು ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಮೃತ ರಬೀನ ತಂದೆ,ತಾಯಿ,ಇಬ್ಬರು ಸಹೋದರಿಯರು, ಓರ್ವ ಸಹೋದರನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here