ಹೊರಗಿನಿಂದ ಬಂದು ಶಾಂತಿ ಕೆಡಿಸುವ ಕೆಲಸ ಮಾಡಬೇಡಿ – ಹೊರಗಿನವರು ಬಾಯಿ ಮುಚ್ಚಿ ಕೂರುವುದೇ ದೇಶಪ್ರೇಮ – ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಉದ್ಘಾಟನೆಗೆ ಸಿಎಂ ಉಳ್ಳಾಲಕ್ಕೆ- ಸ್ಪೀಕರ್‌ ಯು.ಟಿ ಖಾದರ್

ಮಂಗಳೂರು: ಬೋಳಿಯಾರ್ ಅನ್ನೋದು ಸಹೋದರತೆ ಇರುವ ಊರು. ಕೆಲವೇ ಕೆಲವು ಯುವಕರಿಂದ ಊರಿಗೆ ಕೆಟ್ಟ ಹೆಸರು ಬಂದಿದೆ. ಇದನ್ನು ಊರಿನವರೇ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ದಯವಿಟ್ಟು ಹೊರಗಿನವರು ಯಾರೂ ಇಲ್ಲಿಗೆ ಬಂದು ಶಾಂತಿ‌ ಕೆಡಿಸುವ ಕೆಲಸ ಮಾಡಬೇಡಿ. ಹೊರಗಿನಿಂದ ಬಂದು ಅಲ್ಲಿ ಮೂಗು ತೂರಿಸೋ ಕೆಲಸ ಬಿಟ್ಟು ಬಿಡಿ. ಹೊರಗಿನವರು ಬಾಯಿ ಮುಚ್ಚಿ ಕೂರುವುದೇ ದೇಶಪ್ರೇಮ ಎಂದು ವಿಧಾನಸಭಾ ಸ್ಪೀಕರ್ ಯು.ಟಿ‌.ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೋಳಿಯಾರ್ ನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಭಾರತ್ ಮಾತ ಕೀ ಜೈ ಅಂತ ಎಲ್ಲಾ ದೇಶಭಕ್ತರು ಎಲ್ಲೂ ಹೇಳಬಹುದು. ಆದರೆ ಅಲ್ಲಿ ಬೇರೆ ಏನು ಅವಾಚ್ಯ ಶಬ್ದ ಬೈದಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ಅಲ್ಲಿ ರಾಜಕೀಯ ಮಾಡಿದ್ರೆ ಯಾವುದೇ ಪಕ್ಷಕ್ಕೂ, ಯಾರಿಗೂ ಒಂದು ಓಟ್ ಹೆಚ್ಚಾಗಲ್ಲ. ವಿಧಾನಸಭಾ ಚುನಾವಣೆಯಲ್ಲಿ ಎರಡೂ ಪಕ್ಷ ಸೇರಿ ನನ್ನನ್ನು ಸೋಲಿಸಲು ಪ್ರಯತ್ನ ಪಟ್ಟರು. ಅವರು ಯಾರು ಅನ್ನೋದು ಎಲ್ಲರಿಗೂ ಗೊತ್ತಿದೆ. ನಾನೀಗ ಸ್ಪೀಕರ್, ಹಾಗಾಗಿ ಯಾವುದೇ ಪಕ್ಷದ ಹೆಸರು ಹೇಳಲ್ಲ. ಚೂರಿ ಇರಿತ ಪ್ರಕರಣವನ್ನು ಸುಮ್ಮನೆ ದೊಡ್ಡದು ಮಾಡೋರೇ ದೇಶದ್ರೋಹಿಗಳು. ಪೊಲೀಸರಿಗೆ ಕೆಲಸ ಮಾಡಲು ಬಿಡಿ, ಅವರು ಎಲ್ಲವನ್ನೂ ಸರಿ‌ ಮಾಡುತ್ತಾರೆ. ಬೋಳಿಯಾರ್ ಘಟನೆಯಲ್ಲಿ ಮೆರವಣಿಗೆ ಎಲ್ಲವೂ ಆಗಿದೆ. ಆದರೆ ಮತ್ತೆ ಮೂರು ಜನ ಬೈಕ್ ನಲ್ಲಿ ಬಂದು ಸಮಸ್ಯೆ ಮಾಡಿದ್ದಾರೆ. ಅವರು ಬೈಕ್ ನಲ್ಲಿ ಬಂದಿರುವುದು ಮತ್ತೆ ಹಲ್ಲೆ ಮಾಡಿರೋದು ದೊಡ್ಡ ತಪ್ಪು. ರಸ್ತೆ, ಮಸೀದಿ, ಎಲ್ಲೂ ನಾವು ಭಾರತ್ ಮಾತ ಕೀ ಜೈ ಹೇಳಬಹುದು. ಅವರು ಏನು ಹೇಳಿದ್ದಾರೆ ಅನ್ನೋ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಅವರು ಹೇಳಿದರು.

ಘಟನೆ ಬಗ್ಗೆ ಹೊರಗಿನವರು ಬಂದು ಮಾತನಾಡೋ ಅಗತ್ಯ ಇಲ್ಲ. ಎರಡೂ ಕಡೆಯ ತಪ್ಪಿನ ಬಗ್ಗೆ ಪೊಲೀಸರು ಸಿಸಿಟಿವಿ ನೋಡಿ ಕ್ರಮ ತೆಗೋತಾರೆ.ನಾನು ಶಾಸಕನಾಗಿ 99% ಸತ್ಪ್ರಜೆಗಳನ್ನು ನೋಡಿಕೊಳ್ಳೋದು ಜವಾಬ್ದಾರಿ. ಉಳಿದ 1% ಕೆಟ್ಟ ಜನರನ್ನು ‌ಪೊಲೀಸರು ನೋಡಿಕೊಳ್ತಾರೆ. ವಾಟ್ಸಪ್ ಮೆಸೇಜ್, ವಾಯ್ಸ್ ಮೆಸೇಜ್ ನೋಡಿಕೊಂಡಿದ್ರೆ ಸಮಾಜ ಎಲ್ಲಿಗೆ ಮುಟ್ಟಬಹುದು. ಪೊಲೀಸರು ತನಿಖೆಗೆ ಕರೆದುಕೊಂಡು ಹೋಗಬಾರದು ಅಂದ್ರೆ ಹೇಗೆ? ಆರೋಪಿಯ ಹೆಂಡತಿಯನ್ನು ಠಾಣೆಗೆ ಕರೆದು ವಿಚಾರಣೆ ಮಾಡಿ ಬಿಟ್ಟಿದ್ದಾರೆ. ಆದರೆ ಇದರ ವಿರುದ್ದ ಫೇಕ್ ವಾಯ್ಸ್ ಮೆಸೇಜ್ ಬಿಟ್ಟು ಜನರಲ್ಲಿ‌ ಗೊಂದಲ ಮೂಡಿಸಿದ್ದಾರೆ. ಅಲ್ಲಿನ ಜನರಿಗೆ ಯಾವುದೇ ಸಮಸ್ಯೆ ಇಲ್ಲ, ಎಲ್ಲಾ ಸಮಸ್ಯೆ ಇರೋದು ಹೊರಗಿನವರಿಗೆ. ನಾವು ಅಲ್ಲಿನ ಸಮಸ್ಯೆ ಬಗೆಹರಿಸಲು ಕೆಲಸ ಮಾಡಬೇಕು. ಅದು ಬಿಟ್ಟು ಅಲ್ಲಿನ ಸಮಸ್ಯೆ ಮತ್ತಷ್ಟು ಹೆಚ್ಚಿಸಲು ನಾವು ಹೋಗಬಾರದು. ನಾನು ಆಸ್ಪತ್ರೆಗೆ ಹೋಗಿಲ್ಲ, ಇಂಥದ್ದಕ್ಕೆ ನಾವು ಪ್ರೋತ್ಸಾಹ ಕೊಡಬಾರದು. ಆಸ್ಪತ್ರೆಯಲ್ಲಿ ಬಡವರಿದ್ದಾರೆ, ಅವರನ್ನು ‌ನಾವು ನೋಡಬೇಕು. ಅದು ಬಿಟ್ಟು ಸಮಸ್ಯೆ ಸೃಷ್ಟಿಸಿ ಗಲಾಟೆ ಮಾಡಿ ಆಸ್ಪತ್ರೆಗೆ ಸೇರಿದವರನ್ನು ನೋಡೋದಲ್ಲ. ಅವರನ್ನು ಅವರಷ್ಟಕ್ಕೆ ಬಿಡಿ, ಅವರು ಅಲ್ಲಿಗೆ ಸರಿಯಾಗ್ತಾರೆ. ನಾನು ಆಸ್ಪತ್ರೆಗೆ ಭೇಟಿ ನೀಡೋದು ಎಲ್ಲಾ ಮಾಡಿದರೆ‌ ಮತ್ತೆ ಗೊಂದಲ ಆಗುತ್ತೆ. ನಾವು ರಾಜಕಾರಣಿಗಳು ಇಂಥದ್ದಕ್ಕೆ ತಲೆ ಹಾಕಲೇಬಾರದು. ಯಾಕೆ ಒಬ್ಬೊಬ್ಬರು ರಾಜಕೀಯದವರು ಅವರ ಹತ್ತಿರ ಹೋಗಬೇಕು. ನನ್ನನ್ನೂ ಸೇರಿಸಿ ರಾಜಕೀಯದವರು ಅಲ್ಲಿಗೆ ಹೋಗಲೇಬಾರದು. ನನಗೆ ನನ್ನ ಕ್ಷೇತ್ರದ ಎಲ್ಲರೂ ಆತ್ಮೀಯರೇ, ಆದರೆ ತಪ್ಪು ಮಾಡಿದವರಿಗೆ ಸಪೋರ್ಟ್ ಮಾಡಲ್ಲ. ಈ ವಿಷಯದಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.

ಚುನಾವಣೆ ಸಂಧರ್ಭ ಕ್ಷೇತ್ರದ ಜನರಿಗೆ ಮಾತು ಕೊಟ್ಟಿದ್ದೆ. ಕ್ಷೇತ್ರದಲ್ಲಿ 24 ಗಂಟೆ ಕುಡಿಯುವ ನೀರಿನ ಯೋಜನೆ ಬಗ್ಗೆ ಹೇಳಿದ್ದೆ. ಇದರ ಮೊದಲ ಹಂತದ ಕೆಲಸ ಈಗ ಪೂರ್ಣಗೊಂಡಿದೆ. ಇಡೀ ಉಳ್ಳಾಲ ನಗರಕ್ಕೆ 70 ಲಕ್ಷ ಲೀಟರ್ ನೀರಿನ ಸಿಂಗಲ್ ಟ್ಯಾಂಕ್ ಕೆಲಸ ಆಗಿದೆ. ನಗರಾಭಿವೃದ್ಧಿ ಸಚಿವನಾಗಿದ್ದಾಗ ಬಿಡುಗಡೆಯಾದ 249 ಕೋಟಿ ಮೊತ್ತದಲ್ಲಿ ಈ ಕೆಲಸ ಆಗಿದೆ. ಇನ್ನು ಮನೆ ಮನೆಗಳಿಗೆ ನೀರು ಪೂರೈಕೆ ಕೆಲಸ ಆಗಬೇಕಿದೆ. ಇದಕ್ಕಾಗಿ 386 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮೊದಲ ಹಂತದ ಉದ್ಘಾಟನೆ ಹಾಗೂ ಎರಡನೇ ಹಂತದ ಚಾಲನೆಗೆ ಸಿಎಂ ಬರ್ತಾರೆ. ಶೀಘ್ರದಲ್ಲೇ ಸಿಎಂ ಇದರ ಉದ್ಘಾಟನೆ ಮಾಡಲಿದ್ದಾರೆ. ರಸ್ತೆ, ವಿದ್ಯುತ್, ಶಿಕ್ಷಣಕ್ಕೆ ಅನುದಾನ ಮೀಸಲಿಡಲಾಗಿದೆ. ಅಬ್ಬಕ್ಕ ಭವನ ಹಾಗೂ ಬ್ಯಾರಿ ಭವನದ ಕೆಲಸ ಆಗಲಿದೆ. ಕಡಲ್ಕೊರೆತ ಸಂಬಂಧ ಎನ್ಐಟಿಕೆ ಅಧ್ಯಯನದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಜೊತೆ ಮತ್ತು ಟೆಕ್ನಿಕಲ್ ಎಕ್ಸ್ ಪರ್ಟ್ ಜೊತೆ ಚರ್ಚಿಸಿ ಕಡಲ್ಕೊರೆತ ತಡೆ ಕಾರ್ಯ ಮಾಡಲಾಗುವುದು. ಸಮುದ್ರ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಕೆಲಸ ಆದ ಬಳಿಕ ಸರ್ಕಾರ ಅದರ ನಿರ್ವಹಣೆಗೂ ಹಣ ಕೊಡಬೇಕು. ಸಮುದ್ರದಲ್ಲಿ ಮಾಡಿದ ಕಾರ್ಯಕ್ಕೆ ನಿರ್ವಹಣೆ ಅಗತ್ಯ ಇದೆ. ನಾವು ತಾತ್ಕಾಲಿಕ ಕೆಲಸ ಮಾಡಿ ಮನೆಗಳು ನಾಶ ಆಗದಂತೆ ನೋಡಿದ್ದೇವೆ. ಈ ಬಾರಿ ಹೆಚ್ಚು ಅಪಾಯ ಇರೋ ಜಾಗಗಳಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ. ಉಚ್ಚಿಲದ ಬಟ್ಟಪಾಡಿ ಕಡಲ ತೀರ ರಕ್ಷಣೆಯ ಕೆಲಸ ಆಗಬೇಕಿದೆ. ಈ ಕುರಿತು ಎನ್ ಐಟಿಕೆ ಗೆ ಅಧ್ಯಯನ ಮಾಡಲು ಸೂಚಿಸಲಾಗಿದೆ. ಬಾಂಬೆ ಟು ಕೊಚ್ಚಿ ಹೋಗುವ ಕ್ರೂಸ್ ಗೆ ಮಂಗಳೂರಿನಲ್ಲಿ ವ್ಯವಸ್ಥೆ ಬೇಕಾಗಿದೆ. ಸೋಮೇಶ್ವರದಲ್ಲಿ ಟೂರಿಸಂ ಬಂದರು ನಿರ್ಮಾಣದ ಯೋಜನೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾನು ಸಚಿವನಾಗಿದ್ದಾಗ ಜಿಲ್ಲೆಯಲ್ಲಿ ಎಲ್ಲಾ ಸ್ಕಿಲ್ ಗೇಮ್, ಮಸಾಜ್ ಪಾರ್ಲರ್ ಬಂದ್ ಮಾಡಿಸಿದ್ದೇನೆ. ತುಂಬಾ ಒತ್ತಡ ಇದ್ದರೂ ಎಲ್ಲ ಅಕ್ರಮ ಸಂಪೂರ್ಣ ಬಂದ್ ಆಗಿತ್ತು. ಆದರೆ ಹೊಸ ಸರ್ಕಾರ ಬಂದು ಮತ್ತೊಬ್ಬರು ಸಚಿವರಾದರು. ಆಗ ಯಾರು ಅದನ್ನ ನಿಲ್ಲಿಸೋ ಕೆಲಸ ಮಾಡಿಲ್ಲ. ಈಗ ನನ್ನ ಕ್ಷೇತ್ರದಲ್ಲಿ ಅದನ್ನ ನಿಲ್ಲಿಸಿದ್ದೇನೆ, ಯಾವುದೇ ಅಕ್ರಮ ಇಲ್ಲ. ಉಳಿದಂತೆ‌ ಬೇರೆ ಕಡೆ ಇದ್ದರೆ ಅದಕ್ಕೆ ನಾನು ಏನು ಮಾಡೋದು? ಅಧಿಕಾರ ಇದ್ದಾಗ ಸಂಪೂರ್ಣ ಕೆಲಸ ಮಾಡಿದ್ದೇನೆ. ಹಿಂದಿನ ಉಸ್ತುವಾರಿ ಸಚಿವರು ಎಷ್ಟು ಬಾರಿ ಮಂಗಳೂರಿನಲ್ಲಿ ಸಭೆ ಮಾಡಿದ್ದಾರೆ. ಈಗಿನ ಸಚಿವರು ಬೆಂಗಳೂರು ಹಾಗೂ ಜಿಲ್ಲೆಯಲ್ಲಿ ಸಭೆ ಮಾಡ್ತಾರೆ. ಹಿಂದಿನ ಸಚಿವರು ಯಾರ ಕೈಗಾದ್ರೂ ಸಿಗ್ತಾ ಇದ್ರಾ? ಎಂದು ಯು.ಟಿ. ಖಾದರ್‌ ಪ್ರಶ್ನಿಸಿದರು.

LEAVE A REPLY

Please enter your comment!
Please enter your name here