ಚಂಡೀಪುರ ವೈರಸ್‌ನಿಂದ ಮೊದಲ ಸಾವು – ದೃಢಪಡಿಸಿದ ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ – ಶಂಕಿತ ಪ್ರಕರಣಗಳ ಸಂಖ್ಯೆ 14ಕ್ಕೆ

ಮಂಗಳೂರು/ಅಹ್ಮದಾಬಾದ್: ಗುಜರಾತಿನಲ್ಲಿ ಚಂಡೀಪುರ ವೈರಸ್‌ನಿಂದಾದ ಮೊದಲ ಸಾವನ್ನು ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆಯು ದೃಢಪಡಿಸಿದೆ.

ಎನ್‌ಐವಿಗೆ ಐವರ ರಕ್ತದ ಸ್ಯಾಂಪಲ್‌ಗಳನ್ನು ಕಳುಹಿಸಲಾಗಿದ್ದು, ಈ ಪೈಕಿ ಐದರ ಹರೆಯದ ಬಾಲಕಿಯ ಸಾವು ವೈರಸ್ ಸೋಂಕಿನಿಂದಾಗಿ ಸಂಭವಿಸಿತ್ತು ಎನ್ನುವುದು ದೃಢಪಟ್ಟಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಚಂಡೀಪುರ ವೆಸಿಕುಲೋವೈರಸ್ ನಿಂದಾಗಿ 5 ವರ್ಷದ ಬಾಲಕಿಯ ಸಾವನ್ನು ವರದಿಯು ಖಚಿತಪಡಿಸಿದ್ದು, ಇದು ಮೊದಲ ದೃಢೀಕೃತ ಪ್ರಕರಣವಾಗಿದೆ. ಹೆಚ್ಚಿನ ಸ್ಯಾಂಪಲ್‌ಗಳ ಫಲಿತಾಂಶಗಳಿಗಾಗಿ ನಾವು ಕಾಯುತ್ತಿದ್ದೇವೆ ಎಂದು ತಿಳಿಸಿದ ಸಬರಕಾಂತಾ ಜಿಲ್ಲೆಯ ಹಿಮ್ಮತ್‌ನಗರ ಸರಕಾರಿ ಆಸ್ಪತ್ರೆಯ ಅಧೀಕ್ಷಕ ಡಾ.ಪರೇಶ ಶಿಲಾದರಿಯಾ ಅವರು, ಜಿಲ್ಲೆಯಲ್ಲಿ ಎಂಟು ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದಾರೆ. 29 ಪ್ರಕರಣಗಳ ಪೈಕಿ ವೈರಸ್ ಸೋಂಕಿನಿಂದಾಗಿ ಶಂಕಿತ ಸಾವುಗಳ ಸಂಖ್ಯೆ 14ಕ್ಕೇರಿದೆ ಎಂದು ಗಾಂಧಿನಗರದ ಹಿರಿಯ ಆರೋಗ್ಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಮೃತರಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ರಾಜ್ಯದ ಹೊರಗಿನಿಂದ ಬಂದಿದ್ದ ರೋಗಿಗಳು ಸೇರಿದ್ದಾರೆ.

ಸಾವು ಸಂಭವಿಸಿರುವ ಒಂದು ಪ್ರಕರಣವನ್ನು ಹೊರತುಪಡಿಸಿದರೆ ಇವೆಲ್ಲವೂ ಶಂಕಿತ ಪ್ರಕರಣಗಳಾಗಿವೆ. ಮಕ್ಕಳು ಸಾಯುತ್ತಿದ್ದು, ಹರಡುವಿಕೆಯ ತೀವ್ರತೆಯನ್ನು ಪರಿಗಣಿಸಿ ಜಾಗೃತಿ ಮೂಡಿಸಲು ನಾವು ತಂಡಗಳನ್ನು ನಿಯೋಜಿಸಿದ್ದೇವೆ. ಆರೋಗ್ಯ ಸಚಿವರು ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅರಾವಲಿಯಲ್ಲಿ ಮೂರು ( ಈ ಪೈಕಿ ಒಂದು ದೃಢಪಟ್ಟಿದೆ), ಸಬರಕಾಂತಾದಲ್ಲಿ ಎರಡು,ಮೋರ್ಬಿಯಲ್ಲಿ ಎರಡು, ಮಹಿಸಾಗರ, ಮೆಹ್ಸಾನಾ, ಗಾಂಧಿನಗರ, ಪಂಚಮಹಲ್, ರಾಜಕೋಟ್, ಸುರೇಂದ್ರ ನಗರಗಳಲ್ಲಿ ತಲಾ ಒಂದು ಸೇರಿದಂತೆ 15 ಶಂಕಿತ ಸಾವುಗಳು ವರದಿಯಾಗಿವೆ. ಈವರೆಗೆ ಗುಜರಾತಿನ 14 ಜಿಲ್ಲೆಗಳು ಮತ್ತು ನಗರಗಳಲ್ಲಿ ಶಂಕಿತ ಪ್ರಕರಣಗಳು ವರದಿಯಾಗಿವೆ. ರಾಜ್ಯ ಸರಕಾರವು ಹೊರಡಿಸಿರುವ ಆರೋಗ್ಯ ಬುಲೆಟಿನ್ ಪ್ರಕಾರ, ರಾಜಸ್ಥಾನದ ಉದಯಪುರ ಮತ್ತು ಮಧ್ಯಪ್ರದೇಶದ ಧಾರ್‌ನ ತಲಾ ಇಬ್ಬರು ರೋಗಿಗಳೂ ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here