ಮಂಗಳೂರು: ರಾಜ್ಯದೆಲ್ಲೆಡೆ ಭಾರೀ ಸಂಚಲನವನ್ನುಂಟು ಮಾಡಿದ್ದ ಬಿಜೆಪಿ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಹತ್ಯೆಗೆ ಸಂಬಂಧಿಸಿದಂತೆ ವಿದೇಶಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳನ್ನು ಭಾರತಕ್ಕೆ ಕರೆತರಲು ಕೇಂದ್ರದ ಪ್ರಮುಖ ಗುಪ್ತಚರ ಏಜೆನ್ಸಿ ‘ರಾ’ ದೊಂದಿಗೆ ಎನ್.ಐ.ಎ ಸಂಪರ್ಕದಲ್ಲಿದ್ದು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.
ಪ್ರವೀಣ್ ನೆಟ್ಟಾರ್ ಹತ್ಯಾ ಕೇಸಿನ ತನಿಖೆಯನ್ನು ರಾಜ್ಯ ಸರ್ಕಾರ ಎನ್ ಐ ಎಗೆ ವಹಿಸಿತ್ತು. ಎನ್ ಐ ಎ ಕೇಸಿಗೆ ಸಂಬಂಧಿಸಿದಂತೆ 14 ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಆರು ಜನ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದೆ. ಈಗಾಗಲೇ 1500 ಪುಟಗಳ ಜಾರ್ಜ್ ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ನಡುವೆ ಕೇಸಿಗೆ ಸಂಬಂಧ ಪಟ್ಟ ಇಬ್ಬರು ಪ್ರಮುಖ ಆರೋಪಿಗಳಾದ ಮೊಹಮ್ಮದ್ ಶರೀಫ್, ಕೆ.ಎ ಮಸೂದ್ ವಿದೇಶದಲ್ಲಿ ತಲೆಮರೆಸಿಕೊಂಡಿರುವುದು ಧೃಡಪಟ್ಟ ಹಿನ್ನೆಲೆಯಲ್ಲಿ ಇಂಟರ್ ಪೋಲ್ ಮೂಲಕ ‘ರಾ’ ಏಜೆನ್ಸಿ ಗಲ್ಫ್ ನಲ್ಲಿ ಫೀಲ್ಡಿಗಿಳಿದು ಆರೋಪಿಗಳನ್ನು ವಶಕ್ಕೆ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.