ಹೇ ರಾಂ… ಇದೆಂತಹ ಟೀಕೆ?

ಭೋಪಾಲ್: ಮಹಾತ್ಮ ಗಾಂಧೀಜಿಯನ್ನು ಟೀಕಿಸುವ ಪದ್ಯವೊಂದನ್ನು ಶಾಲಾ ವಿದ್ಯಾರ್ಥಿಯೊಬ್ಬ ಕಾರ್ಯಕ್ರಮದಲ್ಲಿ ಹಾಡಿರುವುದು ಮಧ್ಯಪ್ರದೇಶದಲ್ಲಿ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಸಿಯೋನಿಯ ಸಿಎಂ ರೈಸ್ ಶಾಲೆಯ ಕಾರ್ಯಕ್ರಮವೊಂದರಲ್ಲಿ ಈ ಹಾಡನ್ನು ಹಾಡಲಾಗಿದ್ದು, ಭಾರತ ವಿಭಜನೆ ವೇಳೆ ನಡೆಯುವ ಹಿಂಸಾಚಾರದ ಅವಧಿಯಲ್ಲಿ ಗಾಂಧೀಜಿ ಮೌನವಾಗಿದ್ದರು ಎಂಬ ಅಂಶ ಈ ಹಾಡಿನಲ್ಲಿ ಬಿಂಬಿತವಾಗಿದ್ದು, ನಮಗೆ ಬೋಧಿಸಿದಂತೆ ಕೇವಲ ಚರಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತೇ? ದೇಶಕ್ಕಾಗಿ ಎಷ್ಟು ಮಂದಿ ನೇಣುಗಂಬ ಏರಿದ್ದಾರೆ ಎಂದು ಹಾಡಿನಲ್ಲಿ ಪ್ರಶ್ನಿಸಲಾಗಿದೆ.

ಸಿಯೋಜಿ ಶಾಸಕ ದಿನೇಶ್ ರಾಯ್ ಮುನ್ಮನ್ ಈ ವೇಳೆ ವೇದಿಕೆಯಲ್ಲಿದ್ದು ಚಪ್ಪಾಳೆ ತಟ್ಟುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಧ್ಯಪ್ರದೇಶ ಸರ್ಕಾರ ಹಮ್ಮಿಕೊಂಡಿರುವ ವಿಕಾಸಯಾತ್ರೆ ಸಂಬಂಧ ಫೆಬ್ರುವರಿ 5ರಂದು ನಡೆದ ಕಾರ್ಯಕ್ರಮದಲ್ಲಿ ಈ ಹಾಡು ಹಾಡಲಾಗಿದೆ.ಈ ಹಾಡನ್ನು ಹೇಳಿಕೊಟ್ಟ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ಪ್ರಾಚಾರ್ಯರಿಂದ ವರದಿ ಕೇಳಿದೆ. ದೇಶದ ಗಣ್ಯ ವ್ಯಕ್ತಿಗಳ ಬಗ್ಗೆ ಆಕ್ಷೇಪಾರ್ಹವಾಗಿ, ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ಮಾತನಾಡಬಾರದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣಾಧಿಕಾರಿ ಕೆ.ಕೆ.ಪಾಟೀಲ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here