ಮಂಗಳೂರು: ಬ್ರಹ್ಮರಕೂಟ್ಲು ಸಮೀಪದ ಪೆರಿಯೋಡಿ ಬೀಡಿನ ಬಾಕಿಮಾರು ಗದ್ದೆಯಲ್ಲಿ ಒಣಗಳು ಹಾಕಿದ್ದ ಅಡಿಕೆ ಕದ್ದು ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಕಳ್ಳನನ್ನು ಸಾರ್ವಜನಿಕರು ಹಿಡಿದ ಘಟನೆ ನಡೆದಿದೆ. ಈ ಹಿಂದೆ ಇಲ್ಲಿ ಎರಡು ಬಾರಿ ಅಡಿಕೆ ಕಳ್ಳತನ ಮಾಡಿ ಯಶಸ್ವಿಯಾಗಿದ್ದ ಈ ಕಳ್ಳ ಮೂರನೇ ಬಾರಿ ಅಡಿಕೆ ಕಳ್ಳತನ ಮಾಡಿ ಅದೃಷ್ಟ ಪರೀಕ್ಷೆ ನಡೆಸಿದ್ದ. ಆದರೆ ಅದೃಷ್ಟ ಕೈ ಕೊಟ್ಟಿದ್ದು ಊರವರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಬೆಳಗ್ಗಿನ ಜಾವ 3 ಗಂಟೆ ವೇಳೆಗೆ ರಿಕ್ಷಾದಲ್ಲಿ ಬಂದು ಅಡಿಕೆ ಕದ್ದು ಪರಾರಿ ಆಗಲು ಪ್ರಯತ್ನಿಸುತ್ತಿದ್ದ ಅಡಿಕೆ ಕಳ್ಳನನ್ನು ಊರವರು ಹಿಡಿದು ಮರಕ್ಕೆ ಕಟ್ಟಿ ಹಾಕಿದ್ದಾರೆ. ಸದ್ಯ ಆರೋಪಿಯು ಪೋಲಿಸರು ವಶದಲ್ಲಿದ್ದು, ಈತನನ್ನು ಪರ್ಲಿಯಾ ನಿವಾಸಿ ಆರಿಫ್ ಎಂದು ಗುರುತಿಸಲಾಗಿದೆ.
ಬಿ.ಸಿ ರೋಡ್ ನಲ್ಲಿ ಹಗಲು ವೇಳೆ ರಿಕ್ಷಾ ಚಾಲಕನ ವೃತ್ತಿಯಲ್ಲಿರುವ ಈತ ರಾತ್ರಿ ಕದಿಯುವುದನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡಿದ್ದ. ಯಾರಿಗೂ ಸಂಶಯ ಬಾರದ ರೀತಿಯಲ್ಲಿ ರಿಕ್ಷಾದಲ್ಲಿ ದುಡಿದು ತಿನ್ನುವಂತೆ ಬಿಂಬಿಸುತ್ತಿದ್ದ ಈತ ರಾತ್ರಿ ವೇಳೆ ಕಳ್ಳತನ ಮಾಡುವುದನ್ನು ರೂಢಿಯಾಗಿಸಿಕೊಂಡಿದ್ದ.