ಹೊಸದಿಲ್ಲಿ: ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಕೋರಿ ಕರ್ನಾಟಕದ ವಿದ್ಯಾರ್ಥಿನಿಯರ ಗುಂಪೊಂದು ತುರ್ತು ವಿಚಾರಣೆಗಾಗಿ ಸುಪ್ರೀಂ ಕೋರ್ಟ್ಗೆ ಬುಧವಾರ ಅರ್ಜಿ ಸಲ್ಲಿಸಿದ್ದು, ವಿಚಾರಣೆಗೆ ಸಿಜೆಐ ಸಮ್ಮತಿ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕದಲ್ಲಿ ವಿಶ್ವವಿದ್ಯಾನಿಲಯ ಪೂರ್ವ ಪರೀಕ್ಷೆಗಳು ಮಾರ್ಚ್ 9 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ. ಚಂದ್ರಚೂಡ್ ವಿಷಯದ ಪರಿಶೀಲನೆ ನಡೆಸಿ ಪೀಠವನ್ನು ರಚಿಸುವುದಾಗಿ ವಿದ್ಯಾರ್ಥಿ ಅರ್ಜಿದಾರರಿಗೆ ಭರವಸೆ ನೀಡಿದ್ದಾರೆ. ಮಾರ್ಚ್ 9 ರಂದು ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡದಿದ್ದರೆ ಬಾಲಕಿಯರ ಒಂದು ಶೈಕ್ಷಣಿಕ ವರ್ಷ ಹಾಳಾಗಲಿದೆ ಎಂದು ವಕೀಲ ಶದನ್ ಫರಾಸ್, ಸಿಜೆಐ ಮುಂದೆ ತುರ್ತು ಪಟ್ಟಿ ಮಾಡುವಂತೆ ಕೋರಿದ್ದರು. ಪರೀಕ್ಷೆಗೆ ಹಾಜರಾಗದಂತೆ ಅವರನ್ನು ತಡೆಯುವವರು ಯಾರು ಎಂದು ಸಿಜೆಐ ಕೇಳಿದಾಗ ವಕೀಲರು, ಹೆಣ್ಣುಮಕ್ಕಳು ತಲೆಗೆ ಸ್ಕಾರ್ಫ್ ಹಾಕಿಕೊಂಡು ಪರೀಕ್ಷೆಗೆ ಹೋಗಲು ಅನುಮತಿಸುವುದಿಲ್ಲ ಮತ್ತು ಹುಡುಗಿಯರು ಅದಿಲ್ಲದೇ ಪರೀಕ್ಷೆಯನ್ನು ಬರೆಯಲು ಸಿದ್ಧರಿಲ್ಲ, ನಾವು ಅವರಿಗೆ ಸೀಮಿತ ಪರಿಹಾರವನ್ನು ಬಯಸುತ್ತೇವೆ ಎಂದರು. ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಸರ್ಕಾರಿ ಕಾಲೇಜುಗಳಲ್ಲಿ ನಡೆಯುವ ಪರೀಕ್ಷೆಗಳ ಕುರಿತು ಪ್ರಸ್ತಾಪಿಸಿದ ನಂತರ, ತುರ್ತು ಪಟ್ಟಿಯ ಕೋರಿಕೆಯನ್ನು ಪರಿಗಣಿಸಲು ಸಿಜೆಐ ಒಪ್ಪಿಕೊಂಡಿದ್ದಾರೆ.