ನವದೆಹಲಿ: ಟರ್ಕಿಯಲ್ಲಿ ಭೂಕಂಪನ ಸಂಭವಿಸಿದ ಬಳಿಕ ವಿಶ್ವದ ಇತರ ಪ್ರದೇಶಗಳಲ್ಲಿ ಭೂಕಂಪನದ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.
ಈ ವೇಳೆ ಬೆಚ್ಚಿ ಬೀಳಿಸುವ ಮಾಹಿತಿಯೊಂದನ್ನು ದೇಶದ ಖ್ಯಾತ ಭೂಗರ್ಭ ಶಾಸ್ತ್ರಜ್ಞ ಡಾ. ಎನ್. ರಾಮಚಂದ್ರರಾವ್ ಬಹಿರಂಗಪಡಿಸಿದ್ದಾರೆ. ಯಾವುದೇ ಕ್ಷಣದಲ್ಲಿ ಉತ್ತರಾಖಂಡ್ ನಲ್ಲಿ ಭಾರೀ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಎನ್ ಜಿ ಆರ್ ಐ ಮುಖ್ಯ ವಿಜ್ಞಾನಿ ಕೂಡ ಆಗಿರುವ ರಾಮಚಂದ್ರರಾವ್ ಹೇಳಿದ್ದಾರೆ. ಇದು ಎಚ್ಚರಿಕೆಯ ಕರೆ ಗಂಟೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಭೂಮಿಯ ತಳದಲ್ಲಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಭಾರತದ ಪ್ಲೇಟ್ ಗಳು ವರ್ಷಕ್ಕೆ ಐದು ಸೆಂಟಿಮೀಟರ್ ಚಲಿಸುತ್ತಿವೆ. ಇದರ ಪರಿಣಾಮ ಅತೀವ ಒತ್ತಡ ಸೃಷ್ಟಿಯಾಗುತ್ತಿದೆ. ಇದು ಭೂಕಂಪನಕ್ಕೆ ದಾರಿ ಮಾಡಿಕೊಡಲಿದೆ ಎಂದು ರಾಮಚಂದ್ರರಾವ್ ಎಚ್ಚರಿಕೆ ನೀಡಿದ್ದಾರೆ