ನಿಲ್ಲಿಸಿದ್ದ ಬಸ್ಸಿಗೆ ಬೆಂಕಿ – ಶಯನದಲ್ಲೇ ಮಸಣ ಸೇರಿದ ನಿರ್ವಾಹಕ

ಬೆಂಗಳೂರು: ಬಿಎಂಟಿಸಿ ಬಸ್ಸಿಗೆ  ಬೆಂಕಿಹತ್ತಿ ಉರಿದ ಪರಿಣಾಮ, ಬಸ್ ನಲ್ಲಿ ಮಲಗಿದ್ದ ನಿರ್ವಾಹಕ ಸಜೀವ ದಹನವಾಗಿರುವ ಘಟನೆ ಬೆಂಗಳೂರಿನ ಲಿಂಗಧೀರನಹಳ್ಳಿ ಬಿಎಂಟಿಸಿ ಬಸ್​ ನಿಲ್ದಾಣದಲ್ಲಿ ನಡೆದಿದೆ. ಮೃತ  ನಿರ್ವಾಹಕನನ್ನು ಮುತ್ತಯ್ಯಸ್ವಾಮಿ ಎಂದು ಗುರುತಿಸಲಾಗಿದೆ.
 ಡಿಪೋ 31ಕ್ಕೆ ಸೇರಿದ ಬಿಎಂಟಿಸಿ ಬಸ್​ ರಾತ್ರಿ ರೂಟ್ ಮುಗಿಸಿ ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ತಂಗಿತ್ತು. ಬಸ್​ನಲ್ಲಿ ಚಾಲಕ ಮತ್ತು ನಿರ್ವಾಹಕರಿಬ್ಬರು ಮಲಗಿದ್ದು, ಬೆಳಗ್ಗೆ ಚಾಲಕ ಎದ್ದು ಶೌಚಾಲಯಕ್ಕೆ ಹೋದ  ವೇಳೆ ಈ ಘಟನೆ ಸಂಭವಿಸಿದೆ. ಏಕಾಏಕಿ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಿರ್ವಾಹಕ ಮಲಗಿದ್ದಲ್ಲೇ  ಕರಟಿ ಶವವಾಗಿದ್ದಾನೆ. ಬ್ಯಾಡರಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಬಸ್ ಗಳನ್ನು ದಿನಂಪ್ರತಿ ಪರಿಶೀಲಿಸಲಾಗುತ್ತಿದ್ದು ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

LEAVE A REPLY

Please enter your comment!
Please enter your name here