ಕೇಂದ್ರ ಚುನಾವಣಾ ಆಯುಕ್ತರಾಗಿ ಜ್ಞಾನೇಶ್‌ಕುಮಾರ್, ಸುಖ್ಬೀರ್‌ ಸಿಂಗ್ ಸಂಧು ನೇಮಕ

ಮಂಗಳೂರು/ನವದೆಹಲಿ: ಸುಖ್ಬೀರ್‌ ಸಿಂಗ್‌ ಸಂಧು ಮತ್ತು ಜ್ಞಾನೇಶ್‌ ಕುಮಾರ್‌ ಅವರನ್ನು ನೂತನ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ ಎಂದು ಚುನಾವಣಾ ಆಯುಕ್ತರ ಆಯ್ಕೆ ಸಮಿತಿ ಸದಸ್ಯರೂ ಆಗಿರುವ ಕಾಂಗ್ರೆಸ್‌ ಮುಖಂಡ ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಸಮಿತಿಯ ಸದಸ್ಯರ ಒಮ್ಮತದ ಮೇರೆಗೆ ಈ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅದೀರ್‌ ರಂಜನ್ ಚೌಧರಿ, ಸಮಿತಿ ಮುಂದೆ ಒಟ್ಟು ಆರು ಹೆಸರುಗಳು ಬಂದಿದ್ದವು. ಅವರಲ್ಲಿ ಸಂಧು ಮತ್ತು ಕುಮಾರ್‌ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದರು.

ಆಯ್ಕೆ ಸಮಿತಿಯಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಇರಬೇಕಿತ್ತು. ಆದರೆ, ಕಾನೂನು ಸಚಿವರ ನೇತೃತ್ವದ ಈ ಸಮಿತಿಯ ಎದುರು ಇತ್ತು ಎನ್ನಲಾದ 200ಕ್ಕೂ ಅಧಿಕ ಅಭ್ಯರ್ಥಿಗಳ ಪಟ್ಟಿಯಲ್ಲಿ 6 ಜನರ ಹೆಸರುಗಳು ಅಂತಿಮ ಆಯ್ಕೆ ಸುತ್ತಿಗೆ ಹೇಗೆ ಬಂದವು ಎನ್ನುವುದಕ್ಕೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಚೌಧರಿ ಹೇಳಿದ್ದಾರೆ. ಈ ಮೊದಲಿದ್ದ ಅನೂಪ್‌ ಚಂದ್ರ ಪಾಂಡೆ ಅವರ ಅವಧಿ ಫೆ.14ರಂದು ಮುಕ್ತಾಯಗೊಂಡಿದೆ. ಜತೆಗೆ ಅರುಣ್‌ ಗೋಯೆಲ್‌ ಅವರು ದಿಢೀರ್‌ ರಾಜೀನಾಮೆ ನೀಡಿದ್ದ ಕಾರಣ ಚುನಾವಣಾ ಆಯುಕ್ತರ ಎರಡೂ ಹುದ್ದೆಗಳು ಖಾಲಿಯಾಗಿದ್ದವು.

LEAVE A REPLY

Please enter your comment!
Please enter your name here