ಪಿಡಬ್ಲ್ಯುಡಿ ಗುತ್ತಿಗೆದಾರನ‌ ಮನೆಗೆ ನುಗ್ಗಿದ ದರೋಡೆಕೋರರ ತಂಡ – ನಗ ನಗದು ದೋಚಿ ಪರಾರಿ

ಮಂಗಳೂರು:  ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟು ಎಂಬಲ್ಲಿ ಪಿಡಬ್ಲ್ಯುಡಿ ಕಂಟ್ರಾಕ್ಟರ್ ಮನೆಯಲ್ಲಿ ದರೋಡೆ ನಡೆದ ಘಟನೆ ಶುಕ್ರವಾರ(ಜೂ.21) ರಾತ್ರಿ ನಡೆದಿದೆ.

ಪಿಡಬ್ಲ್ಯುಡಿ ಕಂಟ್ರಾಕ್ಟರ್ ಪದ್ಮನಾಭ ಕೋಟ್ಯಾನ್ ಎಂಬವರ ಫಾರ್ಮ್ ಹೌಸ್ ಮನೆಗೆ ನುಗ್ಗಿದ ದರೋಡೆಕೋರರ ತಂಡ ಮನೆಯವರನ್ನು ಕಟ್ಟಿ ಹಾಕಿ ಚೂರಿ ತೋರಿಸಿ ದರೋಡೆಗೈದಿದೆ. ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದ 8-9 ಮಂದಿಯಿದ್ದ ತಂಡ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ನುಗ್ಗಿದೆ. ಮುಖಕ್ಕೆ ಮಾಸ್ಕ್ ಹಾಕ್ಕೊಂಡಿದ್ದ ತಂಡದ ಸದಸ್ಯರು ಚೂರಿ ತೋರಿಸಿ ಮನೆಯವರನ್ನು ಹೆದರಿಸಿದ್ದಾರೆ.

ಬಳಿಕ ಮನೆಯಲ್ಲಿದ್ದವರನ್ನು ಬೆಡ್ ಶೀಟ್ ಬಳಸಿ ಕೈಕಾಲುಗಳನ್ನು ಕಟ್ಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮನೆಯ ಒಳಗೆಲ್ಲ ತಡಕಾಡಿ ಸಿಕ್ಕಿದ ನಗದು ಹಣ ಮತ್ತು ಒಡವೆಗಳನ್ನು ದೋಚಿದ್ದಾರೆ. ಮನೆ ಮಾಲೀಕನ ವಾಹನವನ್ನು ಕದ್ದುಕೊಂಡು ತೆರಳಿದ್ದು ಮನೆಯಿಂದ ಅನತಿ ದೂರದಲ್ಲಿ ಬಿಟ್ಟು ಹೋಗಿದ್ದಾರೆ. ಈ ವೇಳೆ ಪದ್ಮನಾಬ್ ಅವರಿಗೆ ಹಲ್ಲೆ ಮಾಡಲಾಗಿದ್ದು ಕೈಗೆ ಚೂರಿಯಿಂದ ಇರಿಯಲಾಗಿದೆ. ಪದ್ಮನಾಭ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ‌

ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಆರೋಪಿಗಳ ಗುರುತು ಪತ್ತೆ ಹಚ್ಚಲು ಮತ್ತು ಅವರನ್ನು ಶೀಘ್ರವಾಗಿ ಬಂಧಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿರುವ ಹಿರಿಯ ಪೊಲೀಸ್ ಅಧಿಕಾರಿಗಳು ದರೋಡೆ ತಂಡದ ಪತ್ತೆಗೆ ಮುಂದಾಗಿದ್ದಾರೆ. 

LEAVE A REPLY

Please enter your comment!
Please enter your name here