50ರ ವ್ಯಕ್ತಿಯೊಂದಿಗೆ 19ರ ಯುವತಿಯ ಪ್ರೇಮ – ನಾಪತ್ತೆಯಾದ ಜೋಡಿಯ ಶವ ಕೆರೆಯಲ್ಲಿ ಪತ್ತೆ 

ಮಂಗಳೂರು/ತುಮಕೂರು: ವಿವಾಹಿತ ಪುರುಷನೊಂದಿಗೆ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೃತದೇಹಗಳನ್ನು ಅಗ್ನಿ ಶಾಮಕ ಸಿಬ್ಬಂದಿ ಕೆರೆಯಿಂದ ಹೊರ ತೆಗೆದಿದ್ದಾರೆ. ನಿನ್ನೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆ ನೀರಿಗೆ ಇಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ವಿದ್ಯಾರ್ಥಿನಿ ಅನನ್ಯ (19) ಹಾಗೂ ಬೈರಗೊಂಡ್ಲು ಗ್ರಾಮದ ವಿವಾಹಿತ ಪುರುಷ ರಂಗಶಾಮಣ್ಣ (50) ಮೃತಪಟ್ಟವರು. ಈ ಇಬ್ಬರು ಕೆಲವು ದಿನಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ತಮ್ಮ ಪ್ರೀತಿಯ ಬಗ್ಗೆ ತಮ್ಮ ತಮ್ಮ ಮನೆಯಲ್ಲಿ ಹೇಳಿಕೊಂಡಿದ್ದರು. ಆದರೆ ಇವರ ನಡುವಿನ ವಯಸ್ಸಿನ ಅಂತರ ನೋಡಿ ಮನೆಯಲ್ಲಿ ಪ್ರೀತಿಯನ್ನು ನಿರಾಕರಿಸಿ ಬುದ್ಧಿ ಹೇಳಿದ್ದರು.

ಇದಾದ ಮೇಲೆ ಕಳೆದ 4 ದಿನಗಳ ಹಿಂದೆ ಈ ಪ್ರೇಮಿಗಳು ಮನೆಯಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಆದರೆ ನಿನ್ನೆ ಮಾವತ್ತೂರು ಕೆರೆಯ ದಡ ಮೇಲೆ ಇಬ್ಬರ ಚಪ್ಪಲಿ ಹಾಗೂ ಮೊಬೈಲ್ ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂಥ ಹುಡುಕಾಟ ನಡೆಸಲಾಗಿತ್ತು. ಅದರಂತೆ ಇಂದು ಬೆಳಗ್ಗೆ ಇಬ್ಬರ ಮೃತದೇಹಗಳನ್ನು ಅಗ್ನಿ ಶಾಮಕ ಸಿಬ್ಬಂದಿ ಪತ್ತೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here