ಬಂಟ್ವಾಳ ಪೊಲೀಸ್ ಠಾಣೆಗೆ ಹಾಜರಾದ ಯುವತಿ – ಸುಖಾಂತ್ಯ ಕಂಡ ನಾಪತ್ತೆ ಪ್ರಕರಣ

ಮಂಗಳೂರು: ಬಂಟ್ವಾಳದಿಂದ ನಾಪತ್ತೆಯಾಗಿದ್ದ ಯುವತಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಖುದ್ದು ಹಾಜರಾಗುವ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

ಇಲ್ಲಿನ ಬಿ ಕಸಬ ಗ್ರಾಮದ ಲೆಕ್ಕಸಿರಿ ಪಾದೆ ನಿವಾಸಿ ದಿ.ರಮೇಶ್ ಸಾಲಿಯಾನ್ ಅವರ ಪುತ್ರಿ ನೇಹ ನಾಪತ್ತೆಯಾಗಿರುವ ಬಗ್ಗೆ ಸಹೋದರ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೆಯಲ್ಲಿ ಮದುವೆ ಮಾಡಿಸುವ ಬಗ್ಗೆ ಮಾತುಕತೆ ನಡೆಸಲಾಗಿದ್ದು, ಈ ವೇಳೆ ನೇಹಾ ಸದ್ಯ ಮದುವೆ ಬೇಡ ಎಂದು ವಿದ್ಯಾಭ್ಯಾಸ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದಳು. ಬಳಿಕ ಆಕೆ ಬೆಂಗಳೂರಿಗೆ ಹೋಗುವುದಾಗಿ ಮನೆಯವರಿಗೆ ಮೆಸೇಜ್ ಮಾಡಿ ನಾಪತ್ತೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ನೇರವಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಹಾಜರಾದ ನೇಹ, ನಾನು ಸ್ವಇಚ್ಛೆಯಿಂದ ಮನೆ ಬಿಟ್ಟು ಬೆಂಗಳೂರಿಗೆ ಹೋಗಿದ್ದು, ನನಗೆ ನನ್ನ ಮನೆಯವರೊಂದಿಗೆ ಇರಲು ಇಷ್ಟ ಇಲ್ಲ, ನಾನು ಪಿಜಿಯಲ್ಲಿ ವಾಸ್ತವ್ಯವಿದ್ದು ಮುಂದಕ್ಕೆ ವೃತ್ತಿಯೊಂದಿಗೆ ವಿದ್ಯಾಭ್ಯಾಸ ಮುಂದುವರಿಸಲು ಹಾಗೂ ಬದುಕಲು ನಿಶ್ಚಯಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ. ಬಂಟ್ವಾಳ ನಗರ ಠಾಣಾ ಪೊಲೀಸರು ಈಕೆ ನೀಡಿದ ಹೇಳಿಕೆಯನ್ನು ಮನೆಯವರಿಗೆ ತಿಳಿಸಿದ್ದು ಆಕೆಯನ್ನು ಕಳಿಸಿಕೊಟ್ಟಿರುವುದಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here