ಸ್ವಯಂಘೋಷಿತ ದೇವಮಾನವ ಪೂರ್ಣಾನಂದ ಸ್ವಾಮಿಯಿಂದ ಅಪ್ರಾಪ್ತ, ಅನಾಥ ಬಾಲಕಿಯ ಅತ್ಯಾಚಾರ

ಮಂಗಳೂರು (ವಿಶಾಖಪಟ್ಟಣ): ತನ್ನ ಆಶ್ರಮದಲ್ಲಿ ಅಪ್ರಾಪ್ತ ಅನಾಥ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಶ್ರಮದ ಸ್ವಾಮೀಜಿಯನ್ನು ವಿಶಾಖಪಟ್ಟಣಂ ನಗರದ ಪೊಲೀಸರು ಬಂಧಿಸಿದ್ದಾರೆ.

15 ವರ್ಷ ಪ್ರಾಯದ ಅಪ್ರಾಪ್ತ ಬಾಲಕಿಯ ಮೇಲೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ವೆಂಕೋಜಿಪಾಲೆಂನಲ್ಲಿರುವ ಸ್ವಾಮಿ ಜ್ಞಾನಾನಂದ ಹೆಸರಲ್ಲಿರುವ ಆಶ್ರಮ, ಅನಾಥಾಶ್ರಮ ಮತ್ತು ವೃದ್ಧಾಶ್ರಮದ ಮುಖ್ಯಸ್ಥನಾದ ಸ್ವಾಮಿ ಪೂರ್ಣಾನಂದ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ದಶಕದ ಅವಧಿಯಲ್ಲಿ ಎರಡನೇ ಬಾರಿಗೆ ಈ ಸ್ವಾಮಿಯನ್ನು ಅತ್ಯಾಚಾರದ ಪ್ರಕರಣದಲ್ಲಿ ಬಂಧಿಸಲಾಗುತ್ತಿದೆ. 2011ರ ಸಮಯದಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಈ ಸ್ವಾಮಿಯನ್ನು ಬಂಧಿಸಲಾಗಿತ್ತು.

ಪೊಲೀಸರ ಮಾಹಿತಿ ಪ್ರಕಾರ, ಅಪ್ರಾಪ್ತ ಬಾಲಕಿಯನ್ನು ಸ್ವಾಮೀಜಿ ಒಂದು ವರ್ಷದಿಂದ ತನ್ನ ವಶದಲ್ಲಿಟ್ಟುಕೊಂಡು, ಆಕೆಯನ್ನು ಪದೇ ಪದೇ ಹಿಂಸಿಸುತ್ತಾ, ಅತ್ಯಾಚಾರ ಎಸಗಿದ್ದನು. ಕೆಲಸದಾಕೆಯ ಸಹಾಯದಿಂದ ಬಾಲಕಿ 2023 ರ ಜೂನ್ 13ರಂದು ತಪ್ಪಿಸಿಕೊಂಡು ತಿರುಮಲ ಎಕ್ಸ್‌ಪ್ರೆಸ್ ರೈಲು ಹತ್ತಿ, ಸಹ ಪ್ರಯಾಣಿಕನ ಸಹಾಯದಿಂದ ವಿಜಯವಾಡದಲ್ಲಿರುವ ದಿಶಾ ಸಂಸ್ಥೆಯ ಮೂಲಕ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣವನ್ನು ವೈಜಾಗ್‌ಗೆ ವರ್ಗಾಯಿಸಲಾಗಿದ್ದು, ಆರೋಪಿ ಸ್ವಾಮಿಯನ್ನು ವಶಕ್ಕೆ ಪಡೆಯಲಾಗಿದೆ.

ಬಾಲಕಿಯ ಚಿಕ್ಕವಳಿದ್ದಾಗಲೇ ಆಕೆಯ ಹೆತ್ತವರು ನಿಧನರಾಗಿದ್ದಾರೆ. ಬಳಿಕ ಆಕೆಯ ಅಜ್ಜಿ 2 ವರ್ಷಗಳ ಹಿಂದೆ ಆಶ್ರಮದಲ್ಲಿ ಬಿಟ್ಟು ಹೋಗಿದ್ದರು. ಕಳೆದ ಹಲವು ತಿಂಗಳುಗಳಿಂದ ಪೂರ್ಣಾನಂದ ಸರಸ್ವತಿ ತನಗೆ ಪದೇ ಪದೇ ಹಿಂಸೆ ನೀಡುತ್ತಿದ್ದರು ಹಾಗೂ ಕಿರುಕುಳ ನೀಡುತ್ತಿದ್ದರು ಎಂದು ಬಾಲಕಿ ದೂರಿನಲ್ಲಿ ನೀಡಿದ್ದಾಳೆ. ಬಾಲಕಿಗೆ ಪೋಷಕರಿಲ್ಲದೆ ಅನಾಥೆಯಾದ ಕಾರಣ,ಆಕೆಯ ಪರಿಸ್ಥಿತಿಯ ಲಾಭವನ್ನು ಸ್ವಯಂ ಘೋಷಿತ ದೇವ ಮಾನವ ಪೂರ್ಣಾನಂದ ಪಡೆದುಕೊಂಡಿದ್ದಾನೆ ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಪ್ರಾಪ್ತ ಅನಾಥ ಬಾಲಕಿ ವಿಜಯವಾಡದಲ್ಲಿ ಸ್ವಾಮೀಜಿ ವಿರುದ್ಧ ದೂರು ದಾಖಲಿಸಿ ತನಗಾದ ಅನ್ಯಾಯವನ್ನು, ಸಂಕಷ್ಟವನ್ನು ವಿವರಿಸಿದ್ದಾಳೆ ಎಂದು ದಿಶಾ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿಯಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ, ಸ್ವಾಮೀಜಿಯ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ವಿಜಯವಾಡದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here