ಮಂಗಳೂರು: ಹಾರ್ನ್ ಹಾಕಿದ ಕಾರು ಚಾಲಕನನ್ನು ಪ್ರಶ್ನಿಸಿದ್ದಕ್ಕೆ ತಂಡವೊಂದು ಹಲ್ಲೆಗೈದು ಜೀವ ಬೆದರಿಕೆ ಹಾಕಿದ ಘಟನೆ ನಗರದ ಅತ್ತಾವರದ ಬಳಿ ನಡೆದಿದೆ.
ಝೀಶಾನ್ ಮೊಹಮ್ಮದ್ ಅಮೀನ್ ಮತ್ತು ಇಮಾಜ್ ಇಬ್ರಾಹಿಂ ಹಲ್ಲೆಗೊಳಗಾಗಿದ್ದು ಇವರಿಗೆ ಸಲ್ಮಾನ್, ನೌಫಲ್, ಅಪ್ಪು, ರಶೀದ್ ಹಾಗೂ ಇತರರು ಹಲ್ಲೆ ನಡೆಸಿದ್ದಾರೆ. ಇಮಾಜ್ ಇಬ್ರಾಹಿಂ ಹಾಗೂ ಅವರ ಸಂಬಂಧಿ ಸ್ಕೂಟರ್ ನಲ್ಲಿ ಮನೆಗೆ ಹೋಗುತ್ತಿರುವ ಸಂದರ್ಭ ಅತ್ತಾವರ ಕಾಸಾಗ್ರಾಂಡ್ ಬಳಿ ಹಿಂದಿನಿಂದ ಬರುತ್ತಿದ್ದ ಕಾರಿನ ಚಾಲಕ ಪದೇ ಪದೇ ಜೋರಾಗಿ ಹಾರ್ನ್ ಹಾಕುತ್ತಿದ್ದ. ಇದಕ್ಕೆ ಇಬ್ರಾಹಿಂ ಅವರು ಕಾರ್ ಚಾಲಕನಿಗೆ ಹಾರ್ನ್ ಹಾಕದಂತೆ ಕೈ ಸನ್ನೆ ಮಾಡಿದ್ದು ಕಾರು ಚಾಲಕ ಸಲ್ಮಾನ್ ಕಾರನ್ನು ಮುಂದೆ ಹೋಗಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಅದಕ್ಕೆ ಸಲ್ಮಾನ್ ನಲ್ಲಿ ಸರಿಯಾಗಿ ಮಾತನಾಡು ಎಂದು ಹೇಳಿದ್ದಕ್ಕೆ, ನಿನಗೆ ಬುದ್ಧಿ ಕಲಿಸುತ್ತೇನೆ ಎಂದು ಅಲ್ಲಿಂದ ತೆರಳಿದ್ದಾನೆ. ಕೆಲ ಹೊತ್ತಿನ ಬಳಿಕ ಬಂದ ನೌಫಲ್, ಅಪ್ಪು, ರಶೀದ್ ಮತ್ತಿತರ ತಂಡ ಇಬ್ರಾಹಿಂ ಅವರಿಗೆ ಹಲ್ಲೆ ನಡೆಸಿದೆ. ಈ ಸಂದರ್ಭದಲ್ಲಿ ತಡೆಯಲು ಬಂದ ಝೀಶಾನ್ ಗೆ ಸಲ್ಮಾನ್ ಚೂರಿಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಘಟನೆ ಸಂಬಂಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.