ರಾಜ್ಯದ ಇತಿಹಾಸದಲ್ಲಿ ವಿಪಕ್ಷ ನಾಯಕನಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನ

ಮಂಗಳೂರು: ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿ ವಿರೋಧ ಪಕ್ಷದ ನಾಯಕನಿಲ್ಲದೆ ವಿಧಾನಸಭೆ ಅಧಿವೇಶನ ಆರಂಭಗೊಂಡಿದೆ. ವಿಧಾನಸಭೆ ಅಧಿವೇಶನ ಆರಂಭವಾದರೂ ವಿರೋಧ ಪಕ್ಷ ನಾಯಕ ಇಲ್ಲದೇ ಇರುವ ಸ್ಥಿತಿಯು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಬಿಜೆಪಿ ವಿರುದ್ಧ ಕಿಡಿಕಾರಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, “ಬಿಜೆಪಿಯ 66 ಶಾಸಕರಲ್ಲಿ ವಿರೋಧ ಪಕ್ಷದ ನಾಯಕನಾಗುವ ಅರ್ಹತೆ ಇರುವ ಒಬ್ಬೇ ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ನಾಚಿಕೆಗೇಡು. ಕರ್ನಾಟಕದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನವಿದು. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಪ್ರಜಾಪ್ರಭುತ್ವವನ್ನು ಗೌರವಿಸಲಿಲ್ಲ, ವಿಪಕ್ಷದಲ್ಲಿದ್ದಾಗಲೂ ಗೌರವಿಸುತ್ತಿಲ್ಲ” ಎಂದು ಆರೋಪಿಸಿದೆ.

“ಸರ್ಕಾರ ರಚನೆ ಆಯ್ತು, ನಮ್ಮ ಸರ್ಕಾರ ಟೆಕಾಫ್ ಆಗಿ ಹಲವು ದಿನಗಳಾಯ್ತು, ನಮ್ಮ ಗ್ಯಾರಂಟಿ ಯೋಜನೆಗಳ ಜಾರಿಯೂ ಆಯ್ತು, ಸದನವೂ ಪ್ರಾರಂಭವಾಯ್ತು. ಎಲ್ಲಿ ನಿಮ್ಮ ವಿರೋಧ ಪಕ್ಷದ ನಾಯಕ? ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಗ್ಯಾರಂಟಿಯನ್ನೂ ಕೊಡಲಾಗುತ್ತಿಲ್ಲ ಎಂದರೆ ಎಂತಹ ಹೀನಾಯ ಸ್ಥಿತಿಯಲ್ಲಿದೆ!” ಎಂದು ಕಾಂಗ್ರೆಸ್‌ ಟೀಕಿಸಿದೆ. “ಬಿಜೆಪಿಗೆ ವಿರೋಧ ಪಕ್ಷದ ನಾಯಕನ ‘ಗ್ಯಾರಂಟಿ‘ಯೂ ಇಲ್ಲ! ವಿರೋಧ ಪಕ್ಷದ ನಾಯಕನಿಲ್ಲದೆ ಸದನ ಕಲಾಪ ನಡೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ. ಈ ಕಪ್ಪು ಚುಕ್ಕೆಯನ್ನಿಟ್ಟಿದ್ದು ಬಿಜೆಪಿ” ಎಂದು ಆರೋಪಿಸಿದೆ.

LEAVE A REPLY

Please enter your comment!
Please enter your name here