ಗಗನಸಖಿ ಐನಾಝ್ ಮೇಲಿನ ಅಸೂಯೆ ಕೊಲೆಗೆ ಕಾರಣ-ಉಡುಪಿ ಎಸ್ಪಿ ಡಾ.ಅರುಣ್

ಮಂಗಳೂರು(ಉಡುಪಿ) : ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ, ಏರ್ ಇಂಡಿಯಾ ಸಿಬ್ಬಂದಿ ಪ್ರವೀಣ್ ಅರುಣ್ ಚೌಗುಲೆ (39) ಗೆ ಸಹೋದ್ಯೋಗಿ ಗಗನಸಖಿ ಐನಾಝ್ ಮೇಲಿನ ಅಸೂಯೆ ಮತ್ತು ದ್ವೇಷವೇ ಕೊಲೆಗೆ ಕಾರಣ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದು ಮಹಜರು ಕಾರ್ಯ ನಡೆಸಿದ್ದಾರೆ. ಈತ ಈಗಾಗಲೇ ಕೊಲೆಗೆ ಎರಡು, ಮೂರು ಕಾರಣಗಳನ್ನು ತಿಳಿಸಿದ್ದು, ಒಟ್ಟಾರೆಯಾಗಿ ಆತ ಐನಾಝ್‌ಳನ್ನು ಅತಿಯಾಗಿ ಹಚ್ಚಿಕೊಂಡು ಆಕೆ ತನ್ನ ನಿಯಂತ್ರಣದಲ್ಲಿಯೇ ಇರಬೇಕೆಂಬ ಮನಸ್ಥಿತಿಯಿಂದ ಈ ಕೊಲೆ ಮಾಡಿದ್ದಾನೆ ಎಂದು ಎಸ್ಪಿ ಅರುಣ್ ತಿಳಿಸಿದ್ದಾರೆ.

ಸಾಕಷ್ಟು ಸಾಕ್ಷ್ಯ ಸಂಗ್ರಹ ಹಾಗೂ ಮಾಹಿತಿಗಳನ್ನು ಪಡೆಯುವ ನಿಟ್ಟಿನಲ್ಲಿ ಪೊಲೀಸರು ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಆತ ಕೊಲೆಯ ಸಂದರ್ಭ ಡ್ರಗ್ಸ್ ಸೇವಿಸಿದ್ದಾನೆಯೇ ಅಥವಾ ಆತ ಡ್ರಗ್ಸ್ ವ್ಯಸನಿಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೃತ್ಯಕ್ಕೆ ಬಳಸಿದ ಚೂರಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿಯೂ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here