ಮಂಗಳೂರು(ಚಿತ್ರದುರ್ಗ): ಕೊಬ್ಬರಿ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ತಾಲೂಕಿನ ಜಯಸುವರ್ಣಪುರ ಗ್ರಾಮದಲ್ಲಿ ಜ.30ರ ತಡರಾತ್ರಿ ನಡೆದಿದೆ.
ಚಿಕ್ಕಬ್ಯಾಲದಕೆರೆ ಗ್ರಾಮದ ಜಗದೀಶ್ ಎಂಬುವವರಿಗೆ ಸೇರಿದ ಗೋದಾಮಿನಲ್ಲಿ ಈ ಅವಘಡ ಸಂಭವಿಸಿದೆ. ಜಗದೀಶ್ ಅವರು ಜಯಸುವರ್ಣಪುರ ಗ್ರಾಮದ ತೋಟದಲ್ಲಿ ಗೋದಾಮು ನಿರ್ಮಿಸಿ ಕೊಬ್ಬರಿ ಸಂಗ್ರಹಿಸಿದ್ದರು. ಜ.30ರ ರಾತ್ರಿ ಗೋದಾಮಿಗೆ ಬೆಂಕಿ ಬಿದ್ದಿದೆ. ಗೋದಾಮಿನಲ್ಲಿದ್ದ ಎಲ್ಲಾ ಕೊಬ್ಬರಿ ಹೊತ್ತಿ ಉರಿದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿ ಹತ್ತಿಕೊಂಡ ಬಗ್ಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ.