ವಿವಾಹಿತೆ ಮಹಿಳೆ ಅನುಮಾನಾಸ್ಪದ ಸಾವು-ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಉಸಿರು ನಿಲ್ಲಿಸಿದ ಪತಿರಾಯ? 

ಮಂಗಳೂರು(ಹಾಸನ): ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ವಿವಾಹಿತೆ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಸುರಭಿ(25) ಮೃತ ದುರ್ದೈವಿ. ಹುಣಸೂರು ಮೂಲದ ಸುರಭಿಯನ್ನು ಕಳೆದ ಮೂರು ವರ್ಷಗಳ ಹಿಂದೆ ಪೋಷಕರು ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಸುರಭಿ ಲೋ ಬಿಪಿಯಿಂದ ಮೃತಪಟ್ಟಿದ್ದಾಳೆಂದು ಮನೆಯವರಿಗೆ ಫೋನ್ ಮಾಡಿ ಪತಿ ದರ್ಶನ್ ತಿಳಿಸಿದ್ದಾನೆ. ಆದರೆ ಸುರಭಿ ಪೋಷಕರು ಇದನ್ನು ಒಪ್ಪಲು ತಯಾರಿಲ್ಲ. ಮಗಳು ಆರೋಗ್ಯವಂತಳಾಗಿದ್ದಳು, ಅವಳಿಗೆ ಯಾವುದೇ ಲೋ ಬಿಪಿ ಸಮಸ್ಯೆ ಇರಲಿಲ್ಲ. ಮಗಳನ್ನು ಗಂಡನೇ ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ.

ಸುರಭಿಯೊಂದಿಗೆ ದರ್ಶನ್‌ ಮದುವೆಯಾಗಿದ್ದರೂ ಇನ್ನೊಬ್ಬಳೊಂದಿಗೆ ಅಕ್ರಮ ಸಂಬಂಧವಿಟ್ಟಕೊಂಡಿದ್ದಾನೆ. ಈ ವಿಚಾರ ಸುರಭಿಗೆ ತಿಳಿದ ಆರಂಭದಲ್ಲಿ ಎಲ್ಲಾ ದುಃಖವನ್ನು ಸಹಿಸಿ ಸುಮ್ಮನಾಗಿದ್ದಳು. ಆದರೆ ದರ್ಶನ್‌ ಸಂಬಂಧ ಅತಿರೇಕಕ್ಕೆ ಹೋದಾಗ ದಾಂಪತ್ಯ ಜೀವನ ಹಾಳಾಗದಿರಲೆಂದು ಗಂಡನನ್ನು ಪ್ರಶ್ನಿಸಿದ್ದಾಳೆ. ಇದೇ ಕಾರಣಕ್ಕೆ ದರ್ಶನ್ ಸುರಭಿಯೊಂದಿಗೆ ಜಗಳವಾಡಿದ್ದಾನೆ. ನಮ್ಮ ಮಗಳನ್ನು ದರ್ಶನ್ ಕೊಲೆಮಾಡಿದ್ದಾನೆ, ಅನೈತಿಕ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಕೊಂದಿದ್ದಾನೆ ಎಂದು ಆರೋಪಿಸಿರುವ ಸುರಭಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದರ್ಶನ್ ಹಾಗೂ ಆತನ ತಂದೆ, ತಾಯಿ ವಿರುದ್ಧ ದೂರು ದಾಖಲಾಗಿದ್ದು, ಶ್ರವಣಬೆಳಗೊಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here