ಮಂಗಳೂರು(ಬೆಂಗಳೂರು): ಲೋಕಸಭಾ ಚುನಾವಣೆ ಹಿನ್ನಲೆ ಯಾವುದೇ ಅಕ್ರಮ ನಡೆಯದಂತೆ ಚೆಕ್ಪೋಸ್ಟ್ ನಿರ್ಮಿಸಿ ಹದ್ದಿನ ಕಣ್ಣಿಡಲಾಗಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಯನಗರದಲ್ಲಿ ಎರಡು ಕಾರು ಹಾಗೂ ಒಂದು ಬೈಕ್ನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಬೈಕ್ನಲ್ಲಿ ಒಂದು ಬ್ಯಾಗ್, ಎರಡು ಕಾರ್ನಲ್ಲಿ ತಲಾ ಒಂದೊಂದು ಬ್ಯಾಗ್ನ್ನು ಜಪ್ತಿ ಮಾಡಲಾಗಿದ್ದು, ಫಾರ್ಚುನರ್ ಕಾರಿನಲ್ಲಿದ್ದ ಐವರು ಎಸ್ಕೇಪ್ ಆಗಿದ್ದಾರೆ. ಇನ್ನು ಹಣ ಎಣಿಸಲು ಸಾಧ್ಯವಾಗದೆ ಬ್ಯಾಗ್ನ್ನು ಚುನಾವಣಾ ಅಧಿಕಾರಿಗಳು ಪೊಲೀಸ್ ಠಾಣೆಗೆ ತಂದಿದ್ದಾರೆ.
ಸ್ಥಳದಲ್ಲಿ ಎಂಸಿಸಿ ನೋಡಲ್ ಅಧಿಕಾರಿ ಮನೀಷ್ ಮೌದ್ಗಿಲ್ ಉಪಸ್ಥಿತರಿದ್ದು, ಹಣ ಎಣಿಸುವ ಮಷಿನ್ ತರಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಕಾಯಲಾಗುತ್ತಿದೆ. ಅಧಿಕಾರಿಗಳು ಎರಡು ಕೌಂಟಿಂಗ್ ಮೆಷಿನ್ ಮೂಲಕ ಹಣ ಎಣಿಸಲು ಮುಂದಾಗಿದ್ದಾರೆ. ಸೀಜ್ ಆದ ಬೈಕ್ ಧನಂಜಯ ಎಂಬುವರಿಗೆ ಸೇರಿದ್ದು, ಕಾರು ಸೋಮಶೇಖರ್ ಎಂಬುವರಿಗೆ ಸೇರಿದೆ. ಕಾರಿನ ಒಳಗಡೆ ಇದ್ದ ದಾಖಲಾತಿಗಳನ್ನು ಚುನಾವಣಾಧಿಕಾರಗಳು ವಶಕ್ಕೆ ಪಡೆದಿದ್ದು, ಒಂದು ಮೊಬೈಲ್ ಮತ್ತು ಒಂದಷ್ಟು ದಾಖಲಾತಿಗಳು ಚುನಾವಣಾಧಿಕಾರಿಗಳಿಗೆ ಲಭ್ಯವಾಗಿದೆ. ಸೋಮಶೇಖರ್ ಗಂಗಾಧರಯ್ಯ ಎಂಬುವರ ಹೆಸರಲ್ಲಿ ಕೆಲವು ದಾಖಲೆಗಳು ಇರುವುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ತನಿಖೆ ಬಳಿಕ ನಿಖರ ಮಾಹಿತಿ ದೊರೆಯಲಿದೆ.