ಕೊಡಗು ಮುಂಡ್ರೋಡು ಮೀಸಲು ಅರಣ್ಯದಲ್ಲಿ ಸಾವಿರಾರು ಮರ ಕಡಿದ ಆರೋಪ-ತನಿಖೆಗೆ ಆದೇಶಿಸಿದ ಸಚಿವ ಖಂಡ್ರೆ

ಮಂಗಳೂರು(ಮಡಿಕೇರಿ): ತಲಕಾವೇರಿ ಅಭಯಾರಣ್ಯದ ವಿರಾಜಪೇಟೆ ವಲಯದ ಮುಂಡ್ರೋಡು ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಸಾವಿರಾರು ಮರಗಳನ್ನು ಕಡಿಯಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ತನಿಖೆಗೆ ಆದೇಶಿಸಿದ್ದಾರೆ. ಕೊಡಗು ಜಿಲ್ಲೆಯ ಅರಣ್ಯ ಅಧಿಕಾರಿಗಳು ಮರ ಕಡಿದ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದರು.

ಮರ ಹನನ ಕುರಿತು ಸಚಿವರ ಕಾರ್ಯಾಲಯಕ್ಕೆ ಮಾಹಿತಿ ನೀಡದೆ‌ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಸೂಚನೆ ನೀಡಿದ ಅವರು, ಎಪಿಸಿಸಿಎಫ್ ದರ್ಜೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಜತೆಗೆ, ಮರ ಕಡಿದ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆದೇಶ ನೀಡಿದ್ದಾರೆ. 239 ಮರಗಳನ್ನು ಕಡಿದ ವಿಚಾರವಾಗಿ ಏಪ್ರಿಲ್ 30 ರಂದು ಮೂವರ ವಿರುದ್ಧ ಮುಂಡ್ರೋಟು ರೇಂಜ್ ಫಾರೆಸ್ಟ್ ಆಫೀಸರ್ ಪ್ರಕರಣ ದಾಖಲಿಸಿದ್ದರು. ಆದರೆ, ಕೊಡಗು ಏಕೀಕರಣ ರಂಗದ ಕಾರ್ಯಕರ್ತರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಈ ಪ್ರದೇಶದಲ್ಲಿ ಸಾವಿರಾರು ಮರಗಳನ್ನು ಕಡಿಯಲಾಗಿದೆ ಎಂದು ಆರೋಪಿಸಿದ್ದರು.

ಮರ ಕಡಿದ ವಿಚಾರವಾಗಿ ಸಮಗ್ರ ಪರಿಶೀಲನೆಗಾಗಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯನ್ನು ತಕ್ಷಣವೇ ನಿಯೋಜಿಸಬೇಕು ಮತ್ತು ಮೂರು ದಿನಗಳಲ್ಲಿ ಜಿಪಿಎಸ್ ಟ್ಯಾಗ್ ಮಾಡಿದ ವೀಡಿಯೊಗಳನ್ನು ಒಳಗೊಂಡಂತೆ ವಾಸ್ತವ ವರದಿಯನ್ನು ಸಲ್ಲಿಸಬೇಕು. ನಿರ್ಲಕ್ಷ್ಯ ತೋರಿದ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ. ಮುಂಡ್ರೋಟು, ಮಾಕುಟ್ಟ ಮತ್ತು ಪೊನ್ನಂಪೇಟೆ ಅರಣ್ಯ ಪ್ರದೇಶಗಳು ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಅರಣ್ಯದ ಕೆಲವು ಪ್ರದೇಶಗಳಿಗೆ ಪ್ರವೇಶವೂ ದುರ್ಗಮವಾಗಿದೆ. ರಸ್ತೆ ಬಿಟ್ಟು ಕಾಲುದಾರಿಯಲ್ಲಿ ಕಿಲೋಮೀಟರ್​​​ಗಟ್ಟಲೆ ನಡೆಯಬೇಕಾದ ಪ್ರದೇಶಗಳಿವೆ. ಇದು ಅಕ್ರಮವಾಗಿ ಮರಗಳನ್ನು ಕಡಿಯುವುದು ಮತ್ತು ಸಾಗಾಟ ಮಾಡುವವರಿಗೆ ವರದಾನವಾಗಿದೆ ಎಂದು ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here