ಬೆಳ್ಳಾರೆಯಲ್ಲಿ ಮಹಿಳೆಯ ಕೊಲೆಗೈದ ಆರೋಪಿ ಜಯರಾಮ ನಾಯ್ಕ ಬಂಧನ

ಮಂಗಳೂರು/ಸುಳ್ಯ: ಜೂ.9 ರ ರಾತ್ರಿ ನಡೆದ ಮಹಿಳೆಯೊಬ್ಬರ ಕೊಲೆ ಆರೋಪಿ ಜೋಗಿಯಡ್ಕದ ಜಯರಾಮ ನಾಯ್ಕ ಎಂಬಾತನನ್ನು ಬೆಳ್ಳಾರೆ ಪೊಲೀಸರು  ಜೂ.11ರಂದು ಬಂಧಿಸಿದ್ದಾರೆ.

ಬೆಳ್ಳಾರೆ ಗ್ರಾಮದ ಪಾಟಾಜೆ ನಿವಾಸಿ ಸುಂದರ ಎಂಬವರ ಪತ್ನಿ ನಳಿನಿ (55) ಕೊಲೆಯಾದವರು. ನಳಿನಿ ಎರಡು ವರ್ಷಗಳ ಹಿಂದೆ ಮನೆ ತೊರೆದಿದ್ದು ವಾರಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದ ಅವರು ಬಸ್ ನಿಲ್ದಾಣ, ಇನ್ನಿತರ ಕಡೆಗಳಲ್ಲಿ ಮಲಗುತ್ತಿದ್ದರು. ಅದೇ ರೀತಿ ಮದ್ಯ ವ್ಯಸನಿಯಾಗಿದ್ದ ಆರೋಪಿ ಜಯರಾಮ ನಾಯ್ಕ ಕೂಡ ತನ್ನ ಮನೆ ಬಿಟ್ಟಿದ್ದು, ಈತನು ಕೂಡ ಬಸ್‌ ನಿಲ್ದಾಣ, ಮಾರುಕಟ್ಟೆಯಲ್ಲಿ ರಾತ್ರಿ ತಂಗುತ್ತಿದ್ದ. ಕೊಲೆ ನಡೆದ ದಿನ ನಳಿನಿ ಮತ್ತು ಜಯರಾಮ ಬೆಳ್ಳಾರೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ರಾತ್ರಿ ತಂಗಿದ್ದರು. ಮಧ್ಯರಾತ್ರಿ ಎದ್ದು ಹೊರಗಡೆ ಹೋಗುವಾಗ ನಳಿಸಿ ಅವರ ಕಾಲಿಗೆ ಜಯರಾಮ ತುಳಿದಿದ್ದು, ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕುಡಿತದ ಅಮಲಿನಲ್ಲಿದ್ದ ಜಯರಾಮ ಹತ್ತಿರದಲ್ಲಿದ್ದ ಕಲ್ಲನ್ನು ತಂದು ನಳಿನಿ ಅವರ ತಲೆಗೆ ಎತ್ತಿ ಹಾಕಿದ್ದು, ಗಂಭೀರವಾಗಿ ಗಾಯಗೊಂಡ ನಳಿನಿ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.  

LEAVE A REPLY

Please enter your comment!
Please enter your name here