ಕುವೈತ್‌ನಲ್ಲಿ ಕೇರಳ ಮೂಲದ ಉದ್ಯಮಿಗೆ ಸೇರಿದ ಕಟ್ಟಡದಲ್ಲಿ ಬೆಂಕಿ ದುರಂತ – ಕನಿಷ್ಠ 43 ಮಂದಿ ಸಾವು

ಮಂಗಳೂರು/ಕುವೈತ್: ದಕ್ಷಿಣ ಕುವೈತ್‌ನ ಅಹ್ಮದಿ ಗವರ್ನರೇಟ್‌ನ ಮಂಗಫ್‌ ಬ್ಲಾಕ್‌ನ ಆರು ಅಂತಸ್ತಿನ ಕಟ್ಟಡವೊಂದರಲ್ಲಿ ಜೂ.12 ರಂದು (ಬುಧವಾರ) ಮುಂಜಾನೆ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಕನಿಷ್ಠ 43 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಐದು ಮಂದಿ ಕೇರಳಿಗರ ಸಹಿತ 10 ಮಂದಿ ಭಾರತೀಯರಾಗಿದ್ದಾರೆ. ಗಾಯಗೊಂಡ ಸುಮಾರು 40 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಟ್ಟಡದಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಮಿಕರು ವಾಸಿಸುತ್ತಿದ್ದು ಈ ಪೈಕಿ ಹಲವರನ್ನು ರಕ್ಷಿಸಲಾಗಿದೆ. ಹಲವಾರು ಮಂದಿ ದಟ್ಟ ಹೊಗೆಯ ಕಾರಣ ಉಸಿರುಗಟ್ಟಿ ಸಾವನ್ನಪ್ಪುವಂತಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಕಟ್ಟಡಗಳಲ್ಲಿ ತೀರಾ ಹೆಚ್ಚು ಸಂಖ್ಯೆಯ ಕೆಲಸಗಾರರನ್ನು ಇರಿಸುವುದನ್ನು ವಿರೋಧಿಸಿ ಸದಾ ಎಚ್ಚರಿಕೆ ನೀಡುತ್ತಿದ್ದೆವು. ಬೆಂಕಿಯನ್ನು ನಂದಿಸಲಾಗಿದ್ದು ಅವಘಡಕ್ಕೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ ಕಟ್ಟಡದ ಅಡುಗೆಮನೆಯಲ್ಲಿ ಕಾಣಿಸಿಕೊಂಡ ಬೆಂಕಿ ಅರೆಕ್ಷಣದಲಿ ಇಡೀ ಕಟ್ಟಡವನ್ನು ಮುಂಜಾನೆ 4.30ರ ಸುಮಾರಿಗೆ ವ್ಯಾಪಿಸಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ ಇನ್ನೂ ದೃಢಪಟ್ಟಿಲ್ಲ. ಕೆಲವರು ಕಟ್ಟಡದಿಂದ ಕೆಳಕ್ಕೆ ಜಿಗಿದು ಮೃತಪಟ್ಟಿದ್ದರೆ, ಇನ್ನೂ ಹಲವಾರು ಮಂದಿ ಕಟ್ಟಡದಲ್ಲಿ ಸಿಲುಕಿದ್ದರು. ಅವರು ಕೇರಳ, ತಮಿಳುನಾಡು ಮತ್ತು ಉತ್ತರ ಭಾರತದ ಸುಮಾರು 195 ಕಾರ್ಮಿಕರು ಇಲ್ಲಿ ವಾಸಿಸುತ್ತಿದ್ದರು. ಕೇರಳದ ಉದ್ಯಮಿ ಕೆ ಜಿ ಅಬ್ರಹಾಂ ಅವರ ಎನ್‌ಬಿಟಿಸಿ ಗ್ರೂಪ್‌ ಒಡೆತನದ ಕಟ್ಟಡ ಇದೆಂದು ಹೇಳಲಾಗಿದೆ. ಎನ್‌ಬಿಟಿಸಿ ಸೂಪರ್‌ಮಾರ್ಕೆಟ್‌ ಉದ್ಯೋಗಿಗಳೂ ಇದೇ ಕಟ್ಟಡದಲ್ಲಿ ವಾಸಿಸುತ್ತಿದ್ದರೆನ್ನಲಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here