ಕಾರಿನಲ್ಲಿ ಲಿಫ್ಟ್ : ಹಲ್ಲೆ ನಡೆಸಿ ನಗ-ನಗದು ದೋಚಿ ಪರಾರಿ

ಮಂಗಳೂರು (ಬಂಟ್ವಾಳ): ಕಾರಿನಲ್ಲಿ ಬಂದ ಅಪರಿಚಿತರು ಲಿಪ್ಟ್‌ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಚಿನ್ನದ ಸರ ಹಾಗೂ ನಗದು ದೋಚಿದ ಘಟನೆ ಬಿ.ಸಿ.ರೋಡ್‌ ನಲ್ಲಿ ನಡೆದಿದೆ. ಅಪರಿತ ವ್ಯಕ್ತಿಗಳು ಕೊಡಗು ವೀರಾಜಪೇಟೆ ನಿವಾಸಿ ಎಂ. ಗಂಗಾಧರ (53) ಎಂಬವರಿಗೆ ಹಲ್ಲೆ ನಡೆಸಿ ಸುಮಾರು ರೂ 80,000/- ಮೌಲ್ಯದ ಚಿನ್ನದ ಸರ ಮತ್ತು ರೂ.2,000/- ನಗದು ಹಣವನ್ನು ದೋಚಿದ್ದಾರೆ.

ಆ. 9ರಂದು ಗಂಗಾಧರ ಅವರು ತನ್ನ ಮನೆಯಿಂದ ಬಿ.ಸಿ.ರೋಡ್ ಗೆ ಬಂದಿದ್ದರು. ಆ ದಿನ ರಾತ್ರಿ ಅಲ್ಲಿಂದ ಬಂಟ್ವಾಳ ನರಿಕೊಂಬು ನಲ್ಲಿರುವ ಅವರ ಅಣ್ಣನ ಮನೆಗೆ ಹೋಗಲು ವಾಹನಕ್ಕಾಗಿ ಬಿ.ಸಿ.ರೋಡ್ ನಲ್ಲಿ ಕಾಯುತ್ತಿದ್ದ ವೇಳೆ ಬಿಳಿ ಬಣ್ಣದ ಕಾರಿನಲ್ಲಿ ಬಂದ ಅಪರಿಚಿತರು ಪಾಣೆಮಂಗಳೂರು ಕಡೆಗೆ ತೆರಳುತ್ತಿದ್ದು, ಬರುವಂತೆ ತಿಳಿಸಿರುತ್ತಾರೆ. ಅದರಂತೆ ಗಂಗಾಧರ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಪ್ರಯಾಣಿಸಿದ್ದಾರೆ.

ಕಾರು ಸ್ವಲ್ಪ ಮುಂದೆ ಚಲಿಸುತ್ತಿದ್ದಂತೆ, ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಅಪರಿಚಿತರು ಹಲ್ಲೆ ನಡೆಸಿ, ಅವರ ಬಳಿಯಿದ್ದ ಹಣ ಮತ್ತು ಚಿನ್ನದ ಸರ ಕಸಿದುಕೊಂಡಿದ್ದು, ಬಳಿಕ ಅವರನ್ನು ಕಾರಿನಿಂದ ದೂಡಿ ಹಾಕಿ ತೆರಳಿರುತ್ತಾರೆ.

ಹಲ್ಲೆಯಿಂದ ಗಾಯಗೊಂಡಿದ್ದ ಗಂಗಾಧರ ತನ್ನ ಮನೆಯವರಿಗೆ ಹಾಗೂ ಅಣ್ಣನಿಗೆ ವಿಷಯ ತಿಳಿಸಿ, ಚಿಕಿತ್ಸೆ ಪಡೆದು ಬಂಟ್ವಾಳ ನಗರ ಠಾಣೆಯಲ್ಲಿ ಆ.14ರಂದು ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here