ಶೌಚಾಲಯದಲ್ಲಿ ನಿದ್ದೆಗೆ ಜಾರಿದ ಸುಲ್ತಾನ್‌

ಮಂಗಳೂರು (ಸುಳ್ಯ) : ಅಕ್ಟೀವಾ ಸ್ಕೂಟರ್‌ ನೊಂದಿಗೆ ಬಂದ ವ್ಯಕ್ತಯೋರ್ವ ಹೋಟೆಲೊಂದರ  ಶೌಚಾಲಯದಲ್ಲಿ ನಿದ್ದೆ ಮಾಡಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಘಟನೆ ಸುಳ್ಯದ ಕಲ್ಲುಗುಂಡಿಯಲ್ಲಿ ನಡೆದಿದೆ.

ಮಂಡ್ಯದ ನಿವಾಸಿ ಸುಲ್ತಾನ್ ಎಂಬಾತ ಉಡುಪಿಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶವೊಂದರಿಂದ ಅಕ್ಟೀವಾ ಕದ್ದು ಮಂಡ್ಯದತ್ತ ತೆರಳುವ ವೇಳೆ ದಾರಿ ಮಧ್ಯೆ ಸುಳ್ಯ ಸಮೀಪ ಗೂನಡ್ಕದ ದೊಡ್ಡಡ್ಕದಲ್ಲಿರುವ  ಇಂಡಿಯನ್ ಗೇಟ್ ಹೋಟೆಲ್ ನಲ್ಲಿ ಟೀ ಕುಡಿಯಲೆಂದು ವಾಹನ ನಿಲ್ಲಿಸಿದ್ದಾನೆ. ಟೀ ಕುಡಿದ ಬಳಿಕ ಶೌಚಾಲಯಕ್ಕೆ ಹೋದ ವ್ಯಕ್ತಿ ಅರ್ಧ ಗಂಟೆ ಕಳೆದರೂ ಬಾರದಿರುವುದನ್ನು ಕಂಡು  ಹೋಟೆಲ್‌ ಸಿಬ್ಬಂದಿ ಶೌಚಾಲಯದ ಬಾಗಿಲನ್ನು ಬಡಿದಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಗಾಬರಿಗೊಂಡ ಸಿಬ್ಬಂದಿ ಬಾಗಿಲಿನ ಮೇಲ್ಭಾಗದ ರಂಧ್ರದಿಂದ ಇಣುಕಿ ನೋಡಿದ್ದಾರೆ. ಆಗ ಆ ವ್ಯಕ್ತಿ ಶೌಚಾಲಯದಲ್ಲಿ ಮಲಗಿರುವುದು ಕಂಡುಬಂದಿದೆ. ಮತ್ತಷ್ಟು ಆತಂಕಕ್ಕೆ ಒಳಗಾದ ಹೋಟೆಲ್‌ ಸಿಬ್ಬಂದಿ ಆತನ ಮೇಲೆ ನೀರು ಚಿಮುಕಿಸಿದ್ದಾರೆ. ಈ ವೇಳೆ ನಿದ್ದೆಯಿಂದ ಎದ್ದ ವ್ಯಕ್ತಿ ಶೌಚಾಲಯದ ಬಾಗಿಲು ತೆಗೆದು ಹೊರಬಂದಿದ್ದಾನೆ.  ಹೋಟೆಲ್‌ ಮಾಲಿಕ ವಿಚಾರಿಸಿದಾಗ ಸಂಶಯಾಸ್ಪದವಾಗಿ ಮಾತನಾಡಿದ್ದು ಬಳಿಕ ಅಲ್ಲಿಂದ ಅಕ್ಟೀವಾದಲ್ಲಿ ಮಡಿಕೇರಿ ಕಡೆಗೆ ಪ್ರಯಾಣ ಬೆಳೆಸಿದ್ದಾನೆ. ಈತನ ಬಗ್ಗೆ ಸಂಶಯಗೊಂಡ ಹೋಟೆಲ್‌ನವರು ಕಲ್ಲುಗುಂಡಿ ಪೊಲೀಸ್‌ ಔಟ್‌ ಪೋಸ್ಟ್‌ ಗೆ ಮಾಹಿತಿಯನ್ನು ನೀಡಿದ್ದಾರೆ. ಕಲ್ಲುಗುಂಡಿಯಲ್ಲಿ ಅಕ್ಟೀವಾ ತಡೆದ ಪೊಲೀಸರು ಆತನ ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಬಳಿಕ ಆತನನ್ನು ಸುಳ್ಯ ಠಾಣೆಗೆ ಕರೆತಂದು ಕೋಟಾ ಪೊಲೀಸರಿಗೆ ಠಾಣೆಗೆ ಮಾಹಿತಿ ನೀಡಿ, ಅಕ್ಟೀವಾ ಕಳವಾಗಿರುವುದನ್ನು ಧೃಡಪಡಿಸಿ, ಸುಳ್ಯಕ್ಕೆ ಆಗಮಿಸಿದ ಕೋಟಾ ಪೊಲೀಸರ ವಶಕ್ಕೆ ನೀಡಲಾಯಿತು.

LEAVE A REPLY

Please enter your comment!
Please enter your name here