ಮಂಗಳೂರು(ಬೆಂಗಳೂರು): ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪದ ಮೇಲೆ ಐವರು ಶಂಕಿತ ಉಗ್ರರನ್ನು ಎನ್ಐಎ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮುದಾಸೀರ್, ಫೈಜಲ್ ರಬ್ಬಾನಿ, ಸುಹೇಲ್, ಉಮರ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಬಂಧಿತರಿಂದ 40 ಸಜೀವ ಗುಂಡುಗಳು, ಎರಡು ಡ್ಯಾಗರ್, ಮೊಬೈಲ್, ರಿವಾಲ್ವರ್ ಸೇರಿದಂತೆ ಹಲವು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಗೆ ತರಬೇತಿ ನೀಡಿದ್ದ ಜುನೈದ್ ತಲೆಮರೆಸಿಕೊಂಡಿದ್ದಾನೆ.
2017ರಲ್ಲಿ ಆರ್.ಟಿ ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ 21 ಮಂದಿ ಜೈಲು ಸೇರಿದ್ದರು. ಅದರಲ್ಲಿ ಬಂಧಿತ ಐವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಉಗ್ರರ ಸಂಪರ್ಕ ಬೆಳೆಸಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ನಗರದ ಹತ್ತು ಕಡೆ ಸ್ಫೋಟ ನಡೆಸಲು ಉದ್ದೇಶಿಸಿದ್ದರು ಎಂದು ಸಿಸಿಬಿ ವಿಚಾರಣೆಯಲ್ಲಿ ತಿಳಿದು ಬಂದಿದೆ.
ಬಂಧಿತ ಶಂಕಿತರು ತರಬೇತಿಗೆ ನಿತ್ಯ ಸಂಜೆ ಒಂದೆಡೆ ಸೇರುತ್ತಿದ್ದರು. ಎಲ್ಲರಿಗೂ ಜುನೈದ್ ಮಾಸ್ಟರ್ಮೈಂಡ್ ಆಗಿದ್ದ. ಆತನೇ ಸ್ಫೋಟ ನಡೆಸುವ ಸಂಬಂಧ ತರಬೇತಿ ನೀಡುತ್ತಿದ್ದ. ತರಬೇತಿ ಸ್ಥಳವನ್ನು ಪತ್ತೆ ಮಾಡಿದ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಗೆ ತೆರಳಿದ್ದ ವೇಳೆ ಜುನೈದ್ ಸ್ಥಳದಲ್ಲಿ ಇರಲಿಲ್ಲ. ಆತನ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಲಾಗಿದೆ. ಎಲ್ಲರೂ ರೌಡಿಗಳಾಗಿ ಜೈಲು ಸೇರಿದ್ದರು. ಅಲ್ಲೇ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
Karnataka | Central Crime Branch (CCB) has arrested 5 suspected terrorists. They have been identified as Syed Suhel, Umar, Janid, Mudasir and Zahid. It is suspected that the team had planned to carry out a blast in Bengaluru. All five were accused in a 2017 murder case and were…
— ANI (@ANI) July 19, 2023