ಮಡಿಕೇರಿಯಲ್ಲಿ ಮುಂದುವರೆದ ಮಳೆ, ಹಲವೆಡೆ ಮರಗಳು ಧರೆಗೆ – ಹಾರಂಗಿ ಜಲಾಶಯಕ್ಕೆ ಹೆಚ್ಚು ನೀರು – ನದಿ ತೀರದ ನಿವಾಸಿಗಳಿಗೆ ಸೂಚನೆ

ಮಂಗಳೂರು(ಕೊಡಗು): ನಗರ ಸೇರಿದಂತೆ ಕೊಡಗು ಜಿಲ್ಲೆಯ ಹಲವೆಡೆ ಶನಿವಾರ ಬೆಳಿಗ್ಗೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಹಾರಂಗಿ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರುವ ಸಾಧ್ಯತೆ ಇದೆ. ಹಾಗಾಗಿ, ನದಿಗೆ ನೀರು ಹರಿಸಲು ಕಾವೇರಿ ನೀರಾವರಿ ನಿಗಮ ನಿರ್ಧರಿಸಿದೆ.

ಕೊಡಗಿನ ಘಟ್ಟ ಪ್ರದೇಶಗಳಲ್ಲಿ ಭಾರಿಯಿಂದ ಅತಿ ಭಾರಿ ಮಳೆ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರಲಿದ್ದು ಶೀಘ್ರವೇ ಜಲಾಶಯ ತುಂಬುವ ಸಾಧ್ಯತೆ ಇದೆ. ಹಾಗಾಗಿ ಯಾವುದೇ ಕ್ಷಣದಲ್ಲಿಯೂ ನದಿಗೆ ಹೆಚ್ಚು ನೀರು ಬಿಡುವ ಸಂಭವ ಇದ್ದು ನದಿ ತೀರದ ನಿವಾಸಿಗಳು ಕಟ್ಟೆಚ್ಚರದಿಂದ ಇದ್ದು, ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ ತಿಳಿಸಿದ್ದಾರೆ. ಸದ್ಯ 2,859, ಗರಿಷ್ಠ ಅಡಿಯ ಜಲಾಶಯದಲ್ಲಿ 2,853 ಅಡಿಗಳಷ್ಟು ನೀರಿದೆ. 4,460 ಕ್ಯುಸೆಕ್ ಒಳ ಹರಿವು ಇದೆ. 50 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಆವಂದೂರು ಗ್ರಾಮದ ಯೋಗೇಶ್ ಆಚಾರಿ ಅವರ ಮನೆ ಮೇಲೆ ಶನಿವಾರ ಮರ ಬಿದ್ದು ಹಾನಿಯಾಗಿರುವುದು
ಮಡಿಕೇರಿ ನಗರದ ಅರಣ್ಯ ಭವನದ ಸಮೀಪ ಮರವೊಂದು ವಿದ್ಯುತ್ ತಂತಿಯ ಮೆಲೆ ಬಿದ್ದು ಸುತ್ತಮುತ್ತಲಿನ ಪ್ರದೇಶಗಳಾದ ಪುಟಾಣಿನಗರ, ಮಂಗಳಾದೇವಿ ನಗರ, ಚೇನ್ ಗೇಟ್, ಅಶೋಕಪುರ, ಜಿ.ಟಿ.ರಸ್ತೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿ ಅವಂದೂರು ಗ್ರಾಮದ ಯೋಗೇಶ ಆಚಾರಿ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮದೆ ಗ್ರಾಮದ ತಳೂರು ಸೀತಾರಾಮ ಅವರಿಗೆ ಸೇರಿದ ಲೈನ್ ಮನೆ ಮೇಲೆ ಮರ ಬಿದ್ದಿದ್ದು ಶೀಟ್ ಗಳು ಹಾನಿಯಾಗಿವೆ. ಚೆಂಬು ಗ್ರಾಮದ ಇಬ್ರಾಹಿಂ ಅವರ ಮನೆ ಮೇಲೆ ರಬ್ಬರ್ ಮರ ಬಿದ್ದು 30 ಹೆಂಚುಗಳು ಹಾನಿಯಾಗಿವೆ.

LEAVE A REPLY

Please enter your comment!
Please enter your name here