ಪೊಲೀಸರ ಕಣ್ತಪ್ಪಿಸಲು ವೇಷಭೂಷಣ ಬದಲಿಸಿದ್ದ “ಅಭಿನ(ಯ)ವ” ಹಾಲಶ್ರೀ ಸ್ವಾಮೀಜಿ

ಮಂಗಳೂರು(ಬೆಂಗಳೂರು): ಕುಂದಾಪುರದ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 7 ಕೋಟಿ ವಂಚಿಸಿದ ಚೈತ್ರಾ ಆಂಡ್ ಟೀಮಿನಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿದ್ದ ಹೊಸಪೇಟೆ ಹಿರೇಹಡಗಲಿಯ ಸಂಸ್ಥಾನ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಒಡಿಶಾದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದು ಅಭಿನಯದಲ್ಲಿ ತಮ್ಮದು ಎತ್ತಿದ್ದ ಕೈ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಯವರ ಅತ್ಯಂತ ಆಪ್ತನಾಗಿ, ಟಿಕೆಟ್ ಹಂಚಿಕೆಯಲ್ಲಿ ಕರ್ನಾಟಕದ ಜವಾಬ್ದಾರಿ ಹೊತ್ತ ಪಾತ್ರಧಾರಿಯಾಗಿ, ಚೈತ್ರಾ ಕುಂದಾಪುರ ತಂಡದಲ್ಲಿ ಅಭಿನಯಿಸಿ 1.5 ಕೋಟಿ ರೂಪಾಯಿಯನ್ನು ಉದ್ಯಮಿಯಿಂದ ಪೀಕಿಸಿಕೊಂಡಿದ್ದ ಅಭಿನವ ಹಾಲಶ್ರೀ ಸ್ವಾಮೀಜಿ ಚೈತ್ರಾ ಸಿಸಿಬಿ ಬಲೆಗೆ ಬೀಳುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಸ್ವಾಮೀಜಿ ವೇಷಭೂಷಣ ಬದಲಿಸಿ ಪೊಲೀಸರ ಕಣ್ಣಿಗೆ ಬೀಳದೆ ಪ್ರಯಾಣಿಸುತ್ತಿದ್ದರು ಎನ್ನುವ ವಿಷಯ ಸ್ವಾಮೀಜಿ ಬಂಧನದೊಂದಿಗೆ ಹೊರಬಿದ್ದಿದೆ. ಕೇಸರಿಗೆ ಭಾಯಿ ಭಾಯಿ ಹೇಳಿದ ಸ್ವಾಮೀಜಿ ತಾನೊಬ್ಬ ಸ್ವಾಮೀಜಿ ಎಂಬುದು ಜನರಿಗೆ ತಿಳಿಯದ ಹಾಗೆ ಜನಸಾಮಾನ್ಯರಂತೆ ಪ್ಯಾಂಟ್, ಟೀ ಶರ್ಟ್, ಕೆಲವೊಮ್ಮೆ ಬರ್ಮುಡಾ ಹಾಕಿಕೊಂಡು ಸಾಮಾನ್ಯ ಪ್ರವಾಸಿಗರ ರೀತಿ ಬಿಂಬಿಸಿಕೊಂಡು ಯಾರಿಗೂ ಅನುಮಾನ ಬರದಂತೆ ರೈಲು ಮತ್ತು ಬಸ್ಸಿನ ಮೂಲಕ ಪ್ರಯಾಣಿಸುತ್ತಿದ್ದರು.

ಪೊಲೀಸರು ಸ್ವಾಮೀಜಿಯ ಕಾರು ಚಾಲಕನನ್ನು ಎತ್ತಾಕಿಕೊಂಡು ವಿಚಾರಣೆ ನಡೆಸಿದಾಗ ಸ್ವಾಮೀಜಿ ಹೊಸ ಸಿಮ್ ಬಳಸಿ ಮಾತನಾಡುವುದು ತಿಳಿದುಬಂದಿದೆ. ನಂಬರ್ ಟ್ರೇಸ್ ಮಾಡಿದ ಪೊಲೀಸರಿಗೆ ಸ್ವಾಮೀಜಿ ಹೈದರಾಬಾದ್  ಭಾಗದಲ್ಲಿರುವುದು ತಿಳಿದಿದೆ. ಪೋನ್ ಸಂಪರ್ಕವೇ ಸ್ವಾಮೀಜಿ ಸುಳಿವನ್ನು ಪೊಲೀಸರಿಗೆ ನೀಡಿತ್ತು. ಒಡಿಶಾಕ್ಕೆ ತೆರಳಿ ಅಲ್ಲಿಂದ ನೇರವಾಗಿ ಕಾಶಿಗೆ ತೆರಳಲು ತಯಾರಿ ಮಾಡಿದ್ದ ಸ್ವಾಮೀಜಿ ಒಡಿಶಾ ಪೊಲೀಸರ ಸಹಕಾರದೊಂದಿಗೆ ಸಿಸಿಬಿ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ.

ಸ್ವಾಮೀಜಿಯನ್ನು ಸಿಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಸೆ.29ರ ವರೆಗೆ ಸಿಸಿಬಿ ವಶಕ್ಕೆ ಒಪ್ಪಿಸಿ ಬೆಂಗಳೂರಿನ 19ನೇ ಎಪಿಎಂಎಂ ನ್ಯಾಯಾಲಯ ಆದೇಶಿಸಿದೆ.

LEAVE A REPLY

Please enter your comment!
Please enter your name here