ಶಕ್ತಿ ಯೋಜನೆಯಲ್ಲಿ ಸೋರಿಕೆ – ಬೇಕಾಬಿಟ್ಟಿ ಉಚಿತ ಟಿಕೆಟ್ ಹರಿದು ಬಿಸಾಡಿದ ಬಿಎಂಟಿಸಿ ನಿರ್ವಾಹಕ

ಮಂಗಳೂರು(ಬೆಂಗಳೂರು): 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ತನ್ನ ಐದು ಗ್ಯಾರೆಂಟಿಗಳ ಪೈಕಿ ಮೊದಲಿಗೆ ‘ಶಕ್ತಿ ಯೋಜನೆ’ಯನ್ನು ಜೂನ್ 11ರಂದು ಜಾರಿಗೆ ತಂದಿತ್ತು. ಈ ಯೋಜನೆಯ ಉದ್ದೇಶ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವುದಾಗಿದೆ. ಮಹಿಳಾ ಪ್ರಯಾಣಿಕರ ಸಾರಿಗೆ ವೆಚ್ಚವನ್ನು ಸರ್ಕಾರ ಆಯಾಯ ಸಾರಿಗೆ ನಿಗಮಗಳಿಗೆ ನೀಡುತ್ತದೆ. ಆದರೆ, ಇದನ್ನೇ ದುರ್ಬಳಕೆ ಮಾಡಿಕೊಂಡ ಕೆಲವು ಬಿಎಂಟಿಸಿ ಬಸ್‌ ನಿರ್ವಾಹಕರು ಪ್ರೋತ್ಸಾಹಕ ಧನದ ಆಸೆಯಲ್ಲಿ ಬೇಕಾಬಿಟ್ಟಿಯಾಗಿ ಟಿಕೆಟ್ ಹರಿದು ಬಿಸಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಯೋಜನೆಯನ್ನು ದುರುಪಯೋಗ ಪಡಿಸಿಕೊಂಡಿರುವ ಕೆಲವು ಬಸ್‌ ನಿರ್ವಾಹಕರು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್​ ಸಂಖ್ಯೆಗಳನ್ನು ನಿಗಮಗಳಿಗೆ ತಪ್ಪಾಗಿ ನೀಡುತ್ತಿದ್ದಾರೆ. ಮೆಜೆಸ್ಟಿಕ್​ನಿಂದ–ತಾವರಕೆರೆಗೆ ಹೋಗುವ 242-ಬಿ ಬಿಎಂಟಿಸಿ ಬಸ್​​ನ ನಿರ್ವಾಹಕರೊಬ್ಬರು ಅ. 15ರಂದು ಬೇಕಾಬಿಟ್ಟಿಯಾಗಿ ಹೆಚ್ಚಿನ ಪ್ರೋತ್ಸಾಹಕ ಧನದ ಆಸೆಗೆ ಬಿದ್ದು, ಮಹಿಳೆಯರಿಗೆ ಮಾತ್ರ ಮೀಸಲಾಗಿರುವ ಟಿಕೆಟ್‌ಗಳನ್ನು ಹರಿದು ಬಿಸಾಡಿದ್ದಾರೆ. ನಿರ್ವಾಹಕರ ಈ ವರ್ತನೆ ಕಂಡು ಮಹಿಳಾ ಪ್ರಯಾಣಿಕರೊಬ್ಬರು ಯಾಕೆ ಈ ರೀತಿ ಟಿಕೆಟ್ ಹರಿದು ಬಿಸಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಸುಖಾಸುಮ್ಮನೇ ಮಹಿಳೆಯರಿಗೆ ಮೀಸಲಾಗಿರುವ ಉಚಿತ ಟಿಕೆಟ್‌ಗಳನ್ನು ಹರಿದು, ನಿಗಮಗಳಿಗೆ ನಿರ್ವಾಹಕರು ಹೆಚ್ಚಿನ ಲೆಕ್ಕ ತೋರಿಸುತ್ತಾರೆ. ಹೆಚ್ಚಿನ ಫ್ರೀ ಟಿಕೆಟ್ ತೋರಿಸಿದರೇ ಹೆಚ್ಚು ಪ್ರೋತ್ಸಾಹಕ ಧನ ಬರಬಹುದು ಎಂಬ ಆಸೆಯಿಂದ ಈ ರೀತಿ ಮಾಡುತ್ತಿದ್ದಾರೆ. ಇಂತಹ ನಿರ್ವಾಹಕರಿಂದಲೇ ಶಕ್ತಿ ಯೋಜನೆಗೆ ಕೆಟ್ಟ ಹೆಸರು ಎಂದು ಪ್ರಯಾಣಿಕರು ಅಭಿಪ್ರಾಯ ಪಟ್ಟಿದ್ದಾರೆ.

ಬಿಎಂಟಿಸಿಯಲ್ಲಿ 26 ಸಾವಿರ ಜನ ನಿರ್ವಾಹಕರು, ಚಾಲಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿತ್ಯ 5600 ಟ್ರಿಪ್ ಹೋಗುತ್ತವೆ. ಪ್ರತಿ ಬಸ್ಸನ್ನು ಲೈನ್‌ ಚೆಕ್ಕಿಂಗ್ ಮಾಡುತ್ತೇವೆ. ಬಸ್‌ ಡೀಪೋಗೆ ಬಂದ ತಕ್ಷಣ ಇಟಿಎಂ ಮೆಷಿನ್ ಚೆಕ್‌ ಮಾಡುತ್ತೇವೆ. ಮಹಿಳಾ ಪ್ರಯಾಣಿಕರು ಎಷ್ಟಿದ್ದಾರೆ? ಪುರುಷ ಪ್ರಯಾಣಿಕರು ಎಷ್ಟಿದ್ದಾರೆ? ಎಷ್ಟು ಆದಾಯ ಬಂದಿದೆ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಸದ್ಯ ನಿರ್ವಾಹಕರೊಬ್ಬರು ಬೇಕಾಬಿಟ್ಟಿಯಾಗಿ ಟಿಕೆಟ್ ಹರಿದಿರುವ ಬಗ್ಗೆ ಮಾಹಿತಿ ಬಂದಿದೆ. ನಿರ್ವಾಹಕರ ವಿರುದ್ಧ ತನಿಖೆ ನಡೆಯುತ್ತಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ ಚೀಫ್ ವಿಜಿಲೆನ್ಸ್‌ ಆಫೀಸರ್ ಪ್ರಭಾಕರ ರೆಡ್ಡಿ ಸುದ್ದಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here