ಫುಟ್ ಪಾತ್ ಏರಿದ ಯಮಸ್ವರೂಪಿ ಕಾರು – ಐವರು ಹುಡುಗಿಯರಿಗೆ ಢಿಕ್ಕಿ – ಓರ್ವ ಯುವತಿ ಮೃತ್ಯು-ಪರಾರಿಯಾದ ಕಾರು ಚಾಲಕ ಪೊಲೀಸರಿಗೆ ಶರಣು

ಮಂಗಳೂರು: ನಗರದ ಲೇಡಿಹಿಲ್ ಬಳಿ ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐದು ಮಂದಿಗೆ ಕಾರು ಢಿಕ್ಕಿಯಾಗಿ ಓರ್ವ ಯುವತಿ ದಾರುಣವಾಗಿ ಮೃತಪಟ್ಟ ಭೀಕರ ಅಪಘಾತ ಅ.18ರಂದು ಸಂಜೆ 4 ಗಂಟೆ ಸುಮಾರಿಗೆ ಸಂಭವಿಸಿದೆ. ಅಪಘಾತದಲ್ಲಿ ರೂಪಶ್ರೀ (23) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುರತ್ಕಲ್ ನ ಕಾನ, ಬಾಳದ ಗಂಗಾಧರ್ ಅವರ ಪುತ್ರಿ ರೂಪಶ್ರೀ ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದರೆಂದು ತಿಳಿದುಬಂದಿದೆ.

ಸ್ವಾತಿ (26), ಹಿತ್ನವಿ (16), ಕೃತಿಕಾ(16) ಮತ್ತು ಯತಿಕಾ(12) ರಸ್ತೆಗೆ ಅಪ್ಪಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.5 ಮಂದಿ ಯುವತಿಯರು ಮಂಗಳೂರು ಕಾರ್ಪೋರೇಷನ್ ಈಜುಕೊಳದ ಬಳಿ ಲೇಡಿಹಿಲ್ ನಿಂದ ಮಣ್ಣಗುಡ್ಡ ಜಂಕ್ಷನ್ ಕಡೆಗೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಣ್ಣಗುಡ್ಡ ಜಂಕ್ಷನ್‌ನಿಂದ ಲೇಡಿಹಿಲ್ ಕಡೆಗೆ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಅತೀ ವೇಗದಲ್ಲಿ ಬಂದ ಕಾರು ಐವರಿಗೂ ಢಿಕ್ಕಿಯಾಗಿದೆ. ಕಾರು ಚಾಲಕ ಕಮಲೇಶ್ ಬಲದೇವ್ ಎಂಬಾತ ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ, ಬಳಿಕ ಶೋರೂಮೊಂದರ ಮುಂದೆ ಅಪಘಾತಕ್ಕೆ ಕಾರಣವಾದ ಕಾರನ್ನು ನಿಲ್ಲಿಸಿ ಮನೆಗೆ ತೆರಳಿ ಟ್ರಾಫಿಕ್ ವೆಸ್ಟ್ ಪೊಲೀಸರಿಗೆ ಶರಣಾಗಿದ್ದಾನೆ. ಫುಟ್‌ಪಾತ್‌ ಮೇಲೆ ಕಾರು ಹತ್ತಿಸಿ ನಡೆದ ಅಪಘಾತದ ಬೆಚ್ಚಿ ಬೀಳಿಸುವ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here