ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯ ಕುತ್ತಿಗೆಗೆ ಸುತ್ತಿದ ಹೆಬ್ಬಾವು – ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಕುಡುಕ – ಅಪಾಯದಿಂದ ಪಾರು ಮಾಡಿದ ಪೆಟ್ರೋಲ್‌ ಬಂಕ್‌ ಯುವಕ

ಮಂಗಳೂರು(ಕಣ್ಣೂರು): ಹೆಬ್ಬಾವಿನೊಂದಿಗೆ ಪೆಟ್ರೋಲ್ ಬಂಕ್ ಗೆ ಬಂದ ಪಾನಮತ್ತ ವ್ಯಕ್ತಿಯೊಬ್ಬ ತನ್ನ ಫೋಟೊ ಕ್ಲಿಕ್ಕಿಸುವಂತೆ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಒತ್ತಾಯಿಸಿದ ಸ್ವಾರಸ್ಯಕರ ಘಟನೆ ಕಣ್ಣೂರು ಜಿಲ್ಲೆಯ ವಳಪಟ್ಟಣಂ ಬಳಿ ನಡೆದಿದೆ.

ಮದ್ಯದ ಅಮಲಿನಲ್ಲಿದ್ದ ಚಂದ್ರನ್ ಎಂಬ ವ್ಯಕ್ತಿ ತನ್ನ ಜತೆ ಹೆಬ್ಬಾವನ್ನು ತಂದಿದ್ದ. ಹೆಬ್ಬಾವನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ಫೋಟೊ ಕ್ಲಿಕ್ಕಿಸುವಂತೆ ಕೋರಿದ್ದಾನೆ. ಬಹುಶಃ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವು ಆತನಿಗೆ ಇರಲಿಲ್ಲ. ತಕ್ಷಣವೇ ಹೆಬ್ಬಾವು ಆತನ ಕುತ್ತಿಗೆಗೆ ಸುತ್ತಿಕೊಳ್ಳಲು ಆರಂಭಿಸಿದಾಗ ಪರಿಸ್ಥಿತಿ ಗಂಭೀರವಾಯಿತು. ಇದರಿಂದ ಆತ ಅಲ್ಲೇ ಬಿದ್ದುಬಿಟ್ಟ ಎಂದು ಪೆಟ್ರೋಲ್ ಬಂಕ್ ಸಿಬ್ಬಂದಿ ಅಭಿಷೇಕ್ ಹೇಳಿದ್ದಾರೆ. ನಾನು ಎಂದೂ ಹಾವಿನ ಜತೆಗೆ ಹೋರಾಡಿದ್ದಿಲ್ಲ. ಆದರೆ ಚಂದ್ರನ್ ಕಷ್ಟಪಡುತ್ತಿರುವುದನ್ನು ನೋಡಿ, ತಕ್ಷಣವೇ ಗೋಣಿಚೀಲ ತಂದು ಆತನ ಬಳಿಗೆ ಓಡಿಬಂದೆ. ಹೆಬ್ಬಾವಿನ ಬಾಲವನ್ನು ಹಿಡಿದು ಎಳೆಯತೊಡಗಿದೆ. ನಿಧಾನವಾಗಿ ಅದರ ಹಿಡಿತ ಕಡಿಮೆಯಾಗಿ ಕುತ್ತಿಗೆಯಿಂದ ಬಿದ್ದುಬಿಟ್ಟಿತು. ನನಗೆ ಭಯವಾದರೂ, ಚಂದ್ರನ್ ಜೀವ ಅಪಾಯದಲ್ಲಿದ್ದ ಕಾರಣ ಈ ರಕ್ಷಣಾ ಕಾರ್ಯಕ್ಕೆ ಶಕ್ತಿ ಬಂತು ಎಂದು ಅಭಿಷೇಕ್ ತಿಳಿಸಿದ್ದಾರೆ.

ಚಂದ್ರನ್‌ ಹೊಟ್ಟೆಗಿಳಿಸಿದ ಎಣ್ಣೆ ಅಮಲಿನಲ್ಲಿ ಹೆಬ್ಬಾವನ್ನು ಕುತ್ತಿಗೆಗೆ ಹಾಕಿಕೊಂಡಿದ್ದಾನೆ. ಆದರೆ ಹೆಬ್ಬಾವಿಗೆ ಚಂದ್ರನ್‌ ಎಣ್ಣೆ ಹಾಕಿರುವುದು ಗೊತ್ತಿಲ್ಲವಲ್ಲ ಎಂದು ಜನ ಘಟನೆಯ ಬಗ್ಗೆ ನಗೆಚಟಾಕಿ ಹಾರಿಸಿದರು.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here