ಮದ್ಯವ್ಯಸನಿ ಪುತ್ರನಿಂದ ತಾಯಿಯ ಹತ್ಯೆ-ಅಮಲಿನಲ್ಲಿ ತಾಯಿಯ ಅತ್ಯಾಚಾರಕ್ಕೆ ಪ್ರಯತ್ನ- ವಿರೋಧಿಸಿದ ಹೆತ್ತಮ್ಮನ ಬಾಯಿಗೆ ಟೊಮೆಟೋ ತುರುಕಿ ಉಸಿರುಗಟ್ಟಿಸಿ ಕೊಲೆ – ಬುದ್ದಿವಂತರ ಜಿಲ್ಲೆಯಲ್ಲಿ ತಲೆ ತಗ್ಗಿಸುವ ಕೃತ್ಯ

ಮಂಗಳೂರು (ಕಟೀಲು): ಮಾದಕ ದ್ರವ್ಯದ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನ, ಜಾಥಾ ಮತ್ತು ನಡಿಗೆ ನಡೆಯುತ್ತಿರುವಂತೆ ದ.ಕ ಜಿಲ್ಲೆಯ ಜನತೆ ತಲೆತಗ್ಗಿಸುವಂತಹ ವಿಚಾರ ಬೆಳಕಿಗೆ ಬಂದಿದೆ. ಅ.26ರಂದು ಮೂಲ್ಕಿ ತಾಲೂಕಿನ ಕೊಂಡೇಲಾ ಗ್ರಾಮದ ದುರ್ಗಾನಗರ ನಿವಾಸಿ ರತ್ನಾ ಶೆಟ್ಟಿ (62) ಎಂಬವರನ್ನು ಅವರ ಸ್ವಂತ ಮಗ ರವಿರಾಜ್ ಶೆಟ್ಟಿ (33) ಕೊಲೆ ಮಾಡಿ ಮನೆಗೆ ಬೀಗ ಹಾಕಿ ತೆರಳಿ ಕಿನ್ನಿಗೋಳಿಯ ವಸತಿಗೃಹವೊಂದರಲ್ಲಿ ಉಳಿದುಕೊಂಡಿದ್ದ.ಅ.29ರಂದು ಬೆಳಗ್ಗೆ ತಾಯಿ ವಾಸವಿದ್ದ ಬಾಡಿಗೆ ಕೊಠಡಿಯಲ್ಲಿ ನೊಣಗಳು ಮುತ್ತಿಕೊಂಡಿದ್ದು ಸ್ಥಳೀಯರು ನೋಡಿದಾಗ ರತ್ನಾ ಶೆಟ್ಟಿ ಸಾವನ್ನಪ್ಪಿರುವುದು ಕಂಡುಬಂದಿತ್ತು.

ಬಜ್ಜೆ ಪೊಲೀಸರು ಕೊಲೆ ಶಂಕೆಯಲ್ಲಿ ತನಿಖೆ ನಡೆಸಿ, ಮಗ ರವಿರಾಜ್ ನನ್ನು ಸಂಶಯದ ಮೇಲೆ ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ತಾನೇ ಕೊಂದಿರುವುದಾಗಿ ಒಪ್ಪಿಕೊಂಡ ರವಿರಾಜ್ ಬೆಚ್ಚಿ ಬೀಳಿಸುವ ಸ್ಪೋಟಕ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಮದ್ಯ ವ್ಯಸನಿಯಾಗಿರುವ ರವಿರಾಜ್‌ ಹೆತ್ತ ತಾಯಿಗೆ ಲೈಂಗಿಕ ಕಿರುಕುಳ ನೀಡಿ  ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದು, ವಿರೋಧಿಸಿದ ತಾಯಿಯ ಬಾಯಿಗೆ ಟೊಮೆಟೋ ತುರುಕಿ ಮೂಗು ಮತ್ತು ಬಾಯಿಯನ್ನು ಅದುಮಿಟ್ಟು ಉಸುರುಗಟ್ಟಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೊಲೆಯ ಬಳಿಕ ಮದ್ಯದ ಅಮಲಿನಲ್ಲಿ ಅತ್ಯಾಚಾರ ಮಾಡಲು ಪ್ರಯತ್ನ ಪಟ್ಟಿದ್ದು, ಅಸಫಲನಾಗಿದ್ದ. ಮರಣೋತ್ತರ ಪರೀಕ್ಷೆ ವೇಳೆ ಗಂಟಲಲ್ಲಿ ಟೊಮೇಟೋ ಸಿಕ್ಕಿಹಾಕಿಕೊಂಡಿರುವುದು ಗಮನಕ್ಕೆ ಬಂದಿತ್ತು.

ಪತಿ ದಯಾನಂದ ಶೆಟ್ಟಿ 7 ವರ್ಷದ ಹಿಂದೆ ಮೃತಪಟ್ಟಿದ್ದು, 250 ರೂ. ಸಂಬಳಕ್ಕೆ ಕ್ಯಾಂಟೀನೊಂದರಲ್ಲಿ ದುಡಿಯುತ್ತಿದ್ದ ರತ್ನಾ ಶೆಟ್ಟಿ ಅವರ ಪುತ್ರ ರವಿರಾಜ್‌ ಮಂಗಳೂರಿನ ಪ್ರತಿಷ್ಠಿತ ಕಾರ್ಖಾನೆಯೊಂದರಲ್ಲಿ ಫ್ಲಂಬರ್‌ ಆಗಿ ಉದ್ಯೋಗದಲ್ಲಿದ್ದ. ತಾಯಿ, ಮಗ ಇಬ್ಬರು ಒಂದೇ ಕೋಣೆಯ ಮನೆಯಲ್ಲಿ ವಾಸವಾಗಿದ್ದರು.

ಆರೋಪಿ ರವಿರಾಜ್ ಶೆಟ್ಟಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ಗಾಂಜಾ ಸೇವನೆ ದೃಢಪಟ್ಟಿಲ್ಲ.  ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಿದ್ದು ಅತ್ಯಾಚಾರವಾಗಿರುವ ಬಗ್ಗೆ ಯಾವುದೇ ಕುರುಹು ಕಂಡು ಬಂದಿಲ್ಲ ಎನ್ನಲಾಗಿದೆ. ಆದರೆ ವೈದ್ಯಕೀಯ ವರದಿ ಬಂದ ಬಳಿಕವೇ ಇದನ್ನು ದೃಢಪಡಿಸಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಜಪೆ ಇನ್ಸ್ ಪೆಕ್ಟರ್ ಸಂದೀಪ್ ಮತ್ತು ತಂಡ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here